ಸಾಹಿತ್ಯ ಜನಜೀವನದ ಆಶಯಗಳನ್ನು ಪ್ರತಿಬಿಂಬಿಸದೆ ಜನಪ್ರಿಯ ಮತ್ತು ದ್ವೇಷ ಸಾಹಿತ್ಯದ ಹಿಂದೆ ಚಲಿಸುತ್ತಿರುವುದು ವಿಷಾದನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತಿಪಟೂರು
ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರ ಎಲ್ಲಾ ಕನ್ನಡಿಗರ ಜನಜೀವನದ ಜೀವನಾಡಿಯಾಗುವ ಮೂಲಕ ಸಾಗಬೇಕಿದೆಯಾದರೂ ದುರಾದೃಷ್ಟವಶಾತ್ ಇತ್ತೀಚಿಗೆ ನಮ್ಮ ಸಾಹಿತ್ಯ ಜನಜೀವನದ ಆಶಯಗಳನ್ನು ಪ್ರತಿಬಿಂಬಿಸದೆ ಜನಪ್ರಿಯ ಮತ್ತು ದ್ವೇಷ ಸಾಹಿತ್ಯದ ಹಿಂದೆ ಚಲಿಸುತ್ತಿರುವುದು ವಿಷಾದನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಿಪಟೂರಿನ ಕೆ.ಎಲ್.ಎ. ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನಾಡಿನ ಜನರ ಮನ, ಮನೆಗಳಲ್ಲಿ ರಾರಾಜಿಸಬೇಕಿದೆ. ಸಾಹಿತ್ಯ, ಸಾಹಿತಿಗಳು ಹಾಗೂ ಕನ್ನಡ ಭಾಷೆ, ಸಂಸ್ಕೃತಿ ಕಾರ್ಯಕ್ರಮಗಳನ್ನು ಸರ್ಕಾರಗಳು ಎಲ್ಲೆಡೆ ಹೆಚ್ಚು ಆಯೋಜನೆ ಮಾಡುವ ಮೂಲಕ ಯಾವಾಗಲೂ ಪ್ರೋತ್ಸಾಹಿಸಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ್ರೊ. ಟಿ.ಎಸ್. ನಾಗರಾಜ ಶೆಟ್ಟರ್, ಸಾಮಾಜಿಕ ಅಭಿವೃದ್ಧಿಯ ಹರಿಕಾರ, ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರು ನಾಡು, ನುಡಿ, ಸಂಸ್ಕೃತಿಗಳ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದ್ದರ ಫಲವಾಗಿ ಕಸಾಪ ಉದಯವಾಯಿತು. ಅಂದಿನಿಂದ ಪರಿಷತ್ ಭಾಷಾ ಬೆಳವಣಿಗೆಯಲ್ಲಿ ಹಲವು ಕ್ಲಿಷ್ಟಕರ ಸಂದರ್ಭಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪುಸ್ತಕ ಸಂಸ್ಕೃತಿ ಇನ್ನಿತರೆ ಚಟುವಟಿಕೆಗಳು ನಿರಂತರವಾಗಿ ಸಾಗಲು ಹೆಚ್ಚು ಒತ್ತು ನೀಡಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಎ. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರಸನ್ನರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ವರ್ಷಗಳಿಂದ ಜನ ಮಾನಸಕ್ಕೆ ಹತ್ತಿರವಾಗುವಂತಹ ನೂರಾರು ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಆಯೋಜಿಸಿ ಮೆಚ್ಚುಗೆಗೆ ಪಾತ್ರವಾಗಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು. ನಗರದ ಅಡ್ವಿನ್ ಪ್ಯಾರಾ ಮಡಿಕಲ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಾದ ಶಮಂತ ಹೆಚ್.ಎಸ್. ಹಾಗೂ ಎಂ. ಡಿ. ಶಿವಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ತಾಲೂಕು ಕ.ಸಾ.ಪ ಅಧ್ಯಕ್ಷರಾದ ಎಂ. ಬಸವರಾಜಪ್ಪನವರು ಯುವಕರು, ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪರಿಷತ್ತಿನ ಆಜೀವ ಸದಸ್ಯತ್ವ ಪಡೆಯುವ ಮೂಲಕ ನಾಡು, ನುಡಿಯ ಪ್ರಗತಿಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕಿನ ನಾಲ್ಕು ಹೋಬಳಿಗಳ ಅಧ್ಯಕ್ಷರಾದ ಎನ್. ಚನ್ನಬಸಪ್ಪ, ಡಾ. ಪಿ. ಶಂಕರಪ್ಪ ಬಳ್ಳೆಕಟ್ಟೆ, ಹೆಚ್. ನಂದೀಶಪ್ಪ ಮತ್ತು ಹೆಚ್.ಎಸ್. ಓಂಕಾರಯ್ಯನವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿ. ನಾಗರಾಜು, ಪಿ. ರೇಖಾ. ಎಚ್.ಎಸ್.ಮಂಜಪ್ಪ. ಕೆ.ಸಿ. ಮಲ್ಲಿಕಾರ್ಜುನಯ್ಯ, ಟಿ.ಸಿ.ಗೋವಿಂದರಾಜು, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.