ಶರಣರ ಆಶಯದಂತೆ ಉತ್ತಮ ಜೀವನ ನಡೆಸಿ

| Published : Sep 02 2024, 02:08 AM IST

ಸಾರಾಂಶ

ನಾವು ಮಾಡುವ ಕಾಯಕದಿಂದ ಮತ್ತೊಬ್ಬರಿಗೆ ಮೋಸ, ವಂಚನೆಯಾಗಬಾರದು

ಮುಂಡರಗಿ: ಬಸವಾದಿ ಶಿವಶರಣರ ಆಶಯದಂತೆ ಸತ್ಯಶುದ್ಧ ಕಾಯಕ ಮಾಡುವ ಮೂಲಕ ಸುಖವಾದ ಜೀವನ ನಡೆಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ಹೇಮಂತಗೌಡ ಪಾಟೀಲ ಅವರ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಮುಂಡರಗಿ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಮಾಡುವ ಕಾಯಕದಿಂದ ಮತ್ತೊಬ್ಬರಿಗೆ ಮೋಸ, ವಂಚನೆಯಾಗಬಾರದು. ಹೀಗಾಗಿ ನಾವು ಸತ್ಯಶುದ್ಧವಾದ ಕಾಯಕ ಮಾಡಬೇಕು. ಮುಂಡರಗಿಯಲ್ಲಿ ಸದಾ ಸಾಹಿತ್ಯದ ವಾತಾವರಣ ಸೃಷ್ಠಿ ಮಾಡುವ ಉದ್ದೇಶದಿಂದ ಪಟ್ಟಣದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರತಿ 15 ದಿನಕ್ಕೊಂದು ಸಾಹಿತ್ಯದ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಿದ್ದು, ಇದಕ್ಕೆ ಎಲ್ಲ ಸಾಹಿತ್ಯಾಸಕ್ತರು ಕೈಜೋಡಿಸಿ ಬೆಂಬಲಿಸಬೇಕು ಎಂದರು.

ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪೂರ ಮಾತನಾಡಿ, ಶ್ರಾವಣ ಮಾಸ ಎಂದರೆ ಒಳ್ಳೊಳ್ಳೆಯ ವಿಷಯ ನಮ್ಮ ಕಿವಿಗಳಿಂದ ಶ್ರವಣ ಮಾಡಿಕೊಳ್ಳುವ ತಿಂಗಳು. ವಚನ ಸಾಹಿತ್ಯ ನಮಗೆ ಅತ್ಯಂತ ಮಹತ್ವದ್ದಾಗಿರುತ್ತದೆ. ವಚನಗಳಿಗೆ ಮನುಷ್ಯನ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಹೀಗಾಗಿ ಪ್ರತಿಯೊಬ್ಬರೂ ಬಸವಾದಿ ಶಿವಶರಣರ ವಚನ ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ. ಹನಮರಡ್ಡಿ ಇಟಗಿ ಶರಣರು ಮತ್ತು ಕಾಯಕ ಕುರಿತು ಮಾತನಾಡಿ, ಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚು ಮಹತ್ವ ನೀಡಿದ್ದರು. ನಾವು ಮಾಡುವ ಕಾಯಕದಲ್ಲಿ ಯಾವುದೇ ಮೇಲು ಕೀಳುಗಳಿಲ್ಲ. ಕಾಯಕ ಎನ್ನುವ ಪದಕ್ಕೆ ಹೆಚ್ಚಿನ ಮಹತ್ವ ತಂದು ಕೊಟ್ಟವರೇ ಬಸವಾದಿ ಶಿವಶರಣರು. ಕಾಯಕ ಮಾಡುವ ವ್ಯಕ್ತಿ ಸದಾ ಹಸನ್ಮುಕಿಯಾಗಿರುತ್ತಾನೆ. ನಾವೆಲ್ಲರೂ ನಿತ್ಯ ನಮ್ಮೂರ ರಸ್ತೆ, ಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಕಾಯಕ ಮೆಚ್ಚಿ ಗೌರವಿಸೋಣ. 12ನೇ ಶತಮಾನದ ಅನುಭವ ಮಂಟಪದಲ್ಲಿ ಯಾವುದೇ ಜಾತಿ ಇರಲಿಲ್ಲ. ಎಲ್ಲ ಜಾತಿ ಜನಾಂಗದವರಿಗೂ ಲಿಂಗ ಕಟ್ಟುವ ಮೂಲಕ ಬಸವಣ್ಣವರು ಎಲ್ಲರನ್ನೂ ಸಮಾನರನ್ನಾಗಿ ಮಾಡಿದ್ದರು. ಅವರ ತತ್ವಾದರ್ಶ ಎಲ್ಲರೂ ಪಾಲಿಸಬೇಕು ಎಂದರು.

ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಮಾತನಾಡಿ, ನಾವು ಈ ಹಿಂದೆ ಸೌರಭ ಎನ್ನುವ ಹೆಸರಿನಲ್ಲಿ ಸುಮಾರು 40 ರಿಂದ 50 ಜನ ಸೇರಿ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದೆವು. ಈಗಲೂ ಸಹ ಅಂತದ್ದೊಂದು ಕಾರ್ಯಕ್ರಮ ಮತ್ತೆ ಪ್ರಾರಂಭಿಸುವ ಮೂಲಕ ಜನರಲ್ಲಿ ಮತ್ತು ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸೋಣ ಎಂದರು. ತಾಲೂಕು ಶಸಾಪ ಅಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೃಷ್ಣಾ ಸಾಹಿಕಾರ, ರಮೇಶಗೌಡ ಪಾಟೀಲ, ಎನ್.ಎನ್. ಕಲಕೇರಿ, ಕಾವೇರಿ ಬೋಲಾ, ಗಿರಿಜಾ ಸೂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೊ. ಎಸ್.ಆರ್. ಬಸಾಪೂರ ಸ್ವಾಗತಿಸಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ ನಿರೂಪಿಸಿ, ಎಂ.ಎಸ್. ಶೀರನಹಳ್ಳಿ ವಂದಿಸಿದರು.