ಸದ್ಗುಣ, ಶುದ್ಧತೆಯಿಂದ ಜೀವನ ನಡೆಸಿ

| Published : Apr 11 2025, 12:37 AM IST

ಸಾರಾಂಶ

ಭಗವಾನ್ ಮಹಾವೀರರು ಅಹಿಂಸಾಧರ್ಮದ ಪ್ರವರ್ತಕರು. ರಾಜಪುತ್ರನಾಗಿ ಹುಟ್ಟಿದರೂ ಜನರ ಕಲ್ಯಾಣಕ್ಕಾಗಿ ರಾಜತ್ವ, ಸಂಸಾರವನ್ನೂ ತ್ಯಾಗಮಾಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ.

ಕುಷ್ಟಗಿ:

ಮನುಷ್ಯನು ಜೀವನದ ಪರಮಸತ್ಯವನ್ನು ಅರಿತುಕೊಳ್ಳಬೇಕು. ಅದರ ಸಾಕ್ಷಾತ್ಕಾರಕ್ಕಾಗಿ ತಪಸ್ಸು, ನೈತಿಕತೆ, ಶುದ್ಧತೆ ಮತ್ತು ಸದ್ಗುಣಗಳಿಂದ ಜೀವನ ನಡೆಸಬೇಕು ಎಂದು ಭಗವಾನ್ ಮಹಾವೀರರು ಹೇಳಿದ್ದಾರೆ ಎಂದು ಶಿಕ್ಷಕ ನಟರಾಜ ಸೋನಾರ ಅಭಿಪ್ರಾಯಪಟ್ಟರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿಯ ಕಾರ್ಯಕ್ರಮದಲ್ಲಿ ಊಪನ್ಯಾಸ ನೀಡಿ ಮಾತನಾಡಿದ ಅವರು, ಭಗವಾನ್ ಮಹಾವೀರರು ಅಹಿಂಸಾಧರ್ಮದ ಪ್ರವರ್ತಕರು. ರಾಜಪುತ್ರನಾಗಿ ಹುಟ್ಟಿದರೂ ಜನರ ಕಲ್ಯಾಣಕ್ಕಾಗಿ ರಾಜತ್ವ, ಸಂಸಾರವನ್ನೂ ತ್ಯಾಗಮಾಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.

ಅಹಿಂಸೆಯೇ ಪರಮ ಧರ್ಮ ಎಂಬುದನ್ನು ದಿವ್ಯಮಂತ್ರವನ್ನಾಗಿಸಿಕೊಳ್ಳಬೇಕು. ಅದನ್ನು ಒಂದು ವ್ರತದಂತೆ ಪಾಲಿಸಬೇಕು ಎಂಬುದು ಮಹಾವೀರರ ಉಪದೇಶವಾಗಿದೆ. ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಹೀಗಾಗಿ ಜೀವನದ ಅತ್ಯುನ್ನತ ಗುರಿಯು ಇತರ ಜೀವಿಗಳಲ್ಲಿನ ಜೀವನ ಗೌರವಿಸಿ, ರಕ್ಷಿಸುವುದೇ ಆಗಿದೆ ಎಂದು ಹೇಳಿದರು.

ವೀರೇಶ ಬಂಗಾರಶೆಟ್ಟರ ಮಾತನಾಡಿ, ಮಹಾವೀರರ ಪ್ರಕಾರ, ಜೀವನದ ಪಾಪಗಳನ್ನು ಪೂಜೆ ಅಥವಾ ಪ್ರಾರ್ಥನೆಗಳಿಂದ ತೊಳೆಯಲಾಗುವುದಿಲ್ಲ. ನಮ್ಮ ಸದ್ಗುಣಶೀಲ ನಡವಳಿಕೆಗಳಿಂದ ಮಾತ್ರವೇ ಪಾಪಗಳನ್ನು ತಪ್ಪಿಸಬಹುದು ಎಂದರು.

ಭರತೇಶ ಜೋಶಿ ಮಾತನಾಡಿ, ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರಗಳನ್ನು ಪಾಲಿಸಬೇಕು. ಈ ಮೂರು ರತ್ನಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಳ್ಳುವುದೇ ಜೀವನದ ಗುರಿ ಎಂಬುದು ಮಹಾವೀರರ ಉಪದೇಶದ ಸಾರವಾಗಿದೆ ಎಂದರು.

ಈ ವೇಳೆ ಕಂದಾಯ ನಿರೀಕ್ಷಕರು ಅಬ್ದಲ್ ರಜಾಕ್, ಜೈನ್‌ ಸಮುದಾಯದ ಮುಖಂಡ ಅಭಿನಂದನ ಗೋಗಿ, ಶಾಂತರಾಜ ಗೋಗಿ, ಶ್ರೇಣಿಕ್ ಗೋಗಿ, ಸುಮಿತ್ ಗೋಗಿ, ಸನ್ಮಿತ್ ಗೋಗಿ, ಅಮರಚಂದ ಜೈನ್, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಸುಂದರರಾಜ, ಪ್ರಜ್ವಲ್ ಹಿರೇಮನಿ, ಚಂದ್ರು ಪೂಜಾರ, ಶಿವುಕುಮಾರ ಗೋತಗಿ, ವಿಜಯ ಕುಲಕರ್ಣಿ, ರಾಜೇಸಾಬ ಗರಡಿಮನಿ, ಮಧುಶ್ರೀ ಪೂಜಾರ, ರೋಷನ್, ನೇತ್ರಾವತಿ ಪರಕಿ ಸೇರಿದಂತೆ ಅನೇಕರು ಇದ್ದರು.