ಸಾರಾಂಶ
ಕುಷ್ಟಗಿ:
ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಂದು ನೆಮ್ಮದಿಯ ಬದುಕು ಕಾಣುತ್ತಿದ್ದೇವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಅಂಬೇಡ್ಕರ್ ನಗರದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವು, ಅಂಬೇಡ್ಕರ್ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಹಕ್ಕುಗಳು ದೊರೆಯಬೇಕು. ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯ ಪಾಲಿಸುವ ಮೂಲಕ ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ ಅಂಬೇಡ್ಕರ್, ಹಲವು ಸವಾಲುಗಳನ್ನು ಎದುರಿಸಿ ಸಂವಿಧಾನ ರಚಿಸಿದ್ದಾರೆ. ಆದರೂ, ಇಂದು ಕೆಲ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಆದರಿಂದ ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥೈಸಿಕೊಂಡು ಎಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಜೀವನ ಸಾಗಿಸಬೇಕು ಎಂದ ಅವರು, ಸರ್ಕಾರದ ಸೌಲಭ್ಯ ಪಡೆದುಕೊಂಡು ಶಿಕ್ಷಣವಂತರಾಗಿ ಸುಭದ್ರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹೇಳಿದರು.ಕೋಡಿಹಳ್ಳಿ ಆದಿ ಜಾಂಬವಮಠದ ಷಡಕ್ಷರಿ ಮುನಿಸ್ವಾಮಿ ಮಾತನಾಡಿ, ಅಂಬೇಡ್ಕರ್ ಎಲ್ಲರ ಬದುಕು ಹಸನಗೊಳಿಸಲು ಶ್ರಮವಹಿಸಿ ಸಂವಿಧಾನ ರಚಿಸಿದ್ದಾರೆ. ಜಾತಿ ಮುಖ್ಯವಲ್ಲ, ಮನುಷ್ಯನ ಬದುಕು ಮುಖ್ಯ ಎಂದು ಅವರು ಅರಿತಿದ್ದರು. ಸಂವಿಧಾನ ಕಲ್ಪಿಸಿದ ಮೀಸಲಾತಿಯ ಸದುಪಯೋಗ ಪಡೆದುಕೊಂಡು ಶಿಕ್ಷಣವಂತರಾಗಿಆರ್ಥಿಕವಾಗಿ ಸಬಲರಾಗಬೇಕು ಎಂದರು.
ಅದ್ಧೂರಿ ಮೆರವಣಿಗೆ:ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳ ಮಾರ್ಗವಾಗಿ ಡೊಳ್ಳು ಕುಣಿತ, ಬ್ಯಾಂಜೋ ವಾದ್ಯಮೇಳಗಳೊಂದಿಗೆ ತಹಸೀಲ್ದಾರ್ ಕಾರ್ಯಾಲಯದ ಹತ್ತಿರವಿರುವ ಅಂಬೇಡ್ಕರ್ ವೃತ್ತದವರೆಗೆ ಸಾಗಿಬಂತು.
ಪುತ್ಥಳಿ ಅನಾವರಣ:ತಹಸೀಲ್ದಾರ್ ಕಾರ್ಯಾಲಯದ ಹತ್ತಿರ ಇರುವ ಅಂಬೇಡ್ಕರ್ ನಗರದಲ್ಲಿ ನೂತನವಾಗಿ ನಿರ್ಮಿಸಿದ ಅಂಬೇಡ್ಕರ್ ಪುತ್ಥಳಿಯನ್ನು ಶ್ರೀಗಳು, ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಅನಾವರಣಗೊಳಿಸಿದರು.
ಈ ವೇಳೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಬಿಇಒ ಸುರೇಂದ್ರ ಕಾಂಬಳೆ, ಸಿಪಿಐ ಯಶವಂತ ಬಿಸನಳ್ಳಿ , ಪುರಸಭೆ ಅಧ್ಯಕ್ಷ ಮಹಾಂತೇಶ ಕಲ್ಲಬಾವಿ, ತಾಪಂ ಇಒ ಪಂಪಾಪತಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಡಿಪಿಒ ಯಲ್ಲಮ್ಮ ಹಂಡಿ, ಟಿ. ರತ್ನಾಕರ, ವಸಂತ ಮೇಲಿನಮನಿ, ನಾಗರಾಜ್ ಮೇಲಿನಮನಿ, ಕೃಷ್ಣಮೂರ್ತಿ ಟೆಂಗುಂಟಿ, ಸುಖರಾಜ ತಾಳಕೇರಿ, ಪ್ರಾಚಾರ್ಯ ಡಾ. ಎಸ್.ವಿ. ಡಾಣಿ, ನಿವೃತ್ತ ಶಿಕ್ಷಕ ಬಿ.ಎಂ. ಕಂಬಳಿ, ಶಿಕ್ಷಕ ಶರಣಪ್ಪ ತುಮರಿಕೊಪ್ಪ ಸೇರಿದಂತೆ ಇತರರು ಇದ್ದರು.