- 4ನೇ ಹಂತ ತಲುಪಿದ ಕಾಯಿಲೆ । ₹56,16,655ಕ್ಕಿಂತ ಹೆಚ್ಚು ವೆಚ್ಚದ ಶಸ್ತ್ರಚಿಕಿತ್ಸೆ । ಆರ್ಥಿಕ ಸಹಾಯಕ್ಕೆ ಕುಟುಂಬ ಮೊರೆ
- ಜಗಳೂರು ತಾಲೂಕು ಉಪ ತಹಸೀಲ್ದಾರ್, ಹಾಲಿ ಪ್ರಭಾರ ಆಹಾರ ಶಿರಸ್ತೇದಾರ್ ಅಜ್ಜಪ್ಪ ಪತ್ರಿಗೆ ಯಸಶ್ವಿ ಶಸ್ತ್ರಚಿಕಿತ್ಸೆ- - -
* ಚಿದಾನಂದ ಹೆಮ್ಮನಬೇತೂರುಕನ್ನಡಪ್ರಭ ವಾರ್ತೆ ಜಗಳೂರು
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದ ಜಗಳೂರು ತಾಲೂಕು ಉಪ ತಹಸೀಲ್ದಾರ್, ಹಾಲಿ ಪ್ರಭಾರ ಆಹಾರ ಶಿರಸ್ತೇದಾರ್ ಅಜ್ಜಪ್ಪ ಪತ್ರಿ ಅವರು ಪುತ್ರಿಯಿಂದಾಗಿ ಮರುಜನ್ಮ ಪಡೆದಿದ್ದಾರೆ.
ತಂದೆಯ ಪ್ರಾಣ ರಕ್ಷಣೆಗಾಗಿ ಚಂದನ ಎ. ಪತ್ರಿ ಗಟ್ಟಿಮನಸ್ಸಿನಿಂದ ಶೇ.70ರಷ್ಟು ಲಿವರ್ ನೀಡಿದ್ದು, ಬೆಂಗಳೂರಿನ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನ ಖ್ಯಾತ ಲಿವರ್ ಟ್ರಾನ್ಸ್ಪ್ಲಾಂಟ್ ವೈದ್ಯರಾದ ಡಾ. ಸಂಜಯ್ ಗೋವಿಲ್ ಅಜ್ಜಪ್ಪ ಪತ್ರಿ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಪತ್ರಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
3 ಎಕರೆ ಜಮೀನು ಮಾರಾಟ:ಅಜ್ಜಪ್ಪ ಪತ್ರಿ 2026ರ ಫೆ.13ರಂದು ಬೆಂಗಳೂರಿನ ಬನ್ನೇರಘಟ್ಟದ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಲಿವರ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ವೈದ್ಯರು ಲಿವರ್ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆ ಅಗತ್ಯವಿದೆ, ಮೊದಲ ಶಸ್ತ್ರಚಿಕಿತ್ಸೆಗೆ ಸುಮಾರು ₹25 ಲಕ್ಷ ವೆಚ್ಚವಾಗಬಹುದು ಎಂದು ತಿಳಿಸಿದ್ದರು. ಈ ವೇಳೆ ಪತ್ರಿ ಕುಟುಂಬಕ್ಕೆ ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಯೋಜನೆ ಪ್ರಯೋಜನವಾಗಿಲ್ಲ. ಆಗ ಚಿಕಿತ್ಸೆ ಹಣ ಹೊಂದಿಸಲು ಹರಪನಹಳ್ಳಿ ವ್ಯಾಪ್ತಿಯ ಸರ್ವೆ ನಂ.82ರಲ್ಲಿ ಇರುವ 3 ಎಕರೆ ಜಮೀನು ಮಾರಾಟ ಮಾಡಿ ಅಜ್ಜಪ್ಪ ಪತ್ರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸದರಿ ಕಾಯಿಲೆ 4ನೇ ಹಂತದಲ್ಲಿದ್ದ ಪರಿಣಾಮ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿಲ್ಲ.
ಚಂದನ, ಭುವನ ಕುಮಾರ್, ಲಿಂಗರಾಜ ಎಂಬ ಮೂವರು ಮಕ್ಕಳಿರುವ ಈ ಕುಟುಂಬದ ಮೇಲೆ ದಾವಣಗೆರೆಯಲ್ಲಿ ಕಟ್ಟಿಸಿದ ಗೃಹ ಸಾಲದ ಹೊರೆ ಇದೆ. ವೈದ್ಯರ ಸಲಹೆಯಂತೆ ಮತ್ತೆ 2026ರ ಫೆ.15ರಂದು ಎರಡನೇ ಬಾರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಈ ವೇಳೆ ಅಜ್ಜಪ್ಪ ಅವರ ಪುತ್ರಿ, ಎಂಜಿನಿಯರಿಂಗ್ ಪದವೀಧರೆ ಚಂದನ ಎ. ಪತ್ರಿ ತನ್ನ ಲಿವರ್ನ ಶೇ.70ರಷ್ಟು ಲಿವರ್ ದಾನ ಮಾಡಿದ್ದಾರೆ. ಆ ಮೂಲಕ ತಂದೆಯ ಜೀವ ಉಳಿಸಿಕೊಂಡಿದ್ದಾರೆ.ಕಂದಾಯ ಸಚಿವರ ಬಳಿ ಅಳಲು:
ಅಪೋಲೋ ಆಸ್ಪತ್ರೆಯಲ್ಲಿ ಲಿವರ್ ಸಿರೋಸಿಸ್ ಕಾಯಿಲೆಯ ಚಿಕಿತ್ಸಾ ವೆಚ್ಚವೇ ₹56,16,655ಕ್ಕಿಂತ ಹೆಚ್ಚು ಆಗಿದೆ. ಈಗ ಎರಡನೇ ಶಸ್ತ್ರಚಿಕಿತ್ಸೆಯ ಬಿಲ್ ಕಟ್ಟಲು ತಮ್ಮ ಕುಟುಂಬಕ್ಕೆ ಹಣದ ಕೊರತೆ ಎದುರಾಗಿದೆ. ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಯೋಜನೆಯ ಅಲ್ಪಮೊತ್ತದ ನೆರವು, ನಿಯಮಗಳಿಂದಾಗಿ ಸೌಲಭ್ಯ ವಂಚಿತವಾಗಿದ್ದೇವೆ. 29 ವರ್ಷದ ಸರ್ಕಾರಿ ಸೇವೆಯ ಸಂಬಳ ಕೂಡಿ ಕಳೆದರೂ ಬಾರದಷ್ಟು ಹಣ ಚಿಕಿತ್ಸೆಗೆ ವೆಚ್ಚವಾಗಿದೆ ಎಂದು 47 ವರ್ಷದ ಅಜ್ಜಪ್ಪ ಪತ್ರಿ ಅಳಲು ತೊಡಿಕೊಂಡಿದ್ದಾರೆ.ನನ್ನ ಮಗಳು ಶೇ.70 ಲಿವರ್ ನೀಡಿ ನನಗೆ ಪುನರ್ಜನ್ಮ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಸಂಬಂಧ ಕಂದಾಯ ಸಚಿವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಅವಲತ್ತು ಮಾಡಿಕೊಂಡೆ. ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ. ಸಾಲ ಮಾಡಿ, ಕೆಲ ದಾನಿಗಳ ಸಹಾಯಹಸ್ತದಿಂದ ಆಸ್ಪತ್ರೆ ಬಿಲ್ ಪಾವತಿಸಿ, ಮನೆಗೆ ಬಂದಿದ್ದೇನೆ. ಸಾರ್ವಜನಿಕರು, ಸಮಾಜ ಸೇವಕರು, ದಾನಿಗಳು, ಸಂಘ ಸಂಸ್ಥೆಗಳು ತಮಗೆ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್: ಅಕೌಂಟ್ ನಂಬರ್: 54042680994, I SFC: SBIN 0040117) ಈ ಖಾತೆಗೆ ನೆರವು ನೀಡುವಂತೆ ಕನ್ನಡಪ್ರಭ ಮೂಲಕ ಉಪ ತಹಸೀಲ್ದಾರ್ ಅಜ್ಜಪ್ಪ ಪತ್ರಿ ಮನವಿ ಮಾಡಿದ್ದಾರೆ.- - -
-12ಜೆ.ಜಿ.ಎಲ್.1: ಉಪ ತಹಸೀಲ್ದಾರ್ ಅಜ್ಜಪ್ಪ ಪತ್ರಿ ಆಸ್ಪತ್ರೆಗೆ ದಾಖಲಾಗಿರುವುದು.-12 ಜೆ.ಜಿ.ಎಲ್.2: ಲಿವರ್ ಟ್ರಾನ್ಸ್ಪ್ಲಾಂಟ್ ಮೂಲಕ ತಂದೆ ಪ್ರಾಣ ಉಳಿಸಿಕೊಂಡ ಪುತ್ರಿ ಚಂದನ ಎ. ಪತ್ರಿ.