ಸುಂಟಿಕೊಪ್ಪ ನಂದಿನಿ ಕ್ಷೀರ ಕೇಂದ್ರಕ್ಕೆ ಬೀಗ: ಗ್ರಾಹಕರ ಪರದಾಟ

| Published : Oct 20 2023, 01:00 AM IST

ಸುಂಟಿಕೊಪ್ಪ ನಂದಿನಿ ಕ್ಷೀರ ಕೇಂದ್ರಕ್ಕೆ ಬೀಗ: ಗ್ರಾಹಕರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೂವರೆ ದಶಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಸಾಕಷ್ಟು ಪ್ರಯತ್ನ ಹಾಗೂ ಬೇಡಿಕೆಯ ಫಲವಾಗಿ ನಂದಿನಿ ಕ್ಷೀರಕೇಂದ್ರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಮಂಜೂರಾಗಿತ್ತು. ಆಗ ನಡೆದ ಹೋರಾಟದಲ್ಲಿ ಸ್ಥಳೀಯ ಪ್ರಮುಖರು ಸುಂಟಿಕೊಪ್ಪ ಪಂಚಾಯಿತಿಯಲ್ಲಿ ನಂದಿನಿ ಕ್ಷೀರ ಕೇಂದ್ರಕ್ಕೆ ಶಾಶ್ವತ ಜಾಗ ಮಂಜೂರಿಗೆ ಸಾಕಷ್ಟು ಶ್ರಮಿಸಿದ್ದರು. ಬಳಿಕ ನಂದಿನಿ ಕ್ಷೀರಕೇಂದ್ರವು ದುಪ್ಪಟ್ಟು ಬೆಲೆಗೆ ಹರಾಜಾಗಿತ್ತು.
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ ಸುಂಟಿಕೊಪ್ಪದ ಪಟ್ಟಣ ಹೃದಯಭಾಗದಲ್ಲಿ ರಾಜ್ಯ ಸರಕಾರಿ ಸೌಮ್ಯದ ನಂದಿನಿ ಕ್ಷೀರ ಕೇಂದ್ರವು ಬಂದ್‌ ಆಗಿದ್ದು ಗ್ರಾಹಕರಿಗೆ ಸಮಸ್ಯೆ ಉಂಟುಮಾಡಿದೆ. ಒಂದೂವರೆ ದಶಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಸಾಕಷ್ಟು ಪ್ರಯತ್ನ ಹಾಗೂ ಬೇಡಿಕೆಯ ಫಲವಾಗಿ ನಂದಿನಿ ಕ್ಷೀರಕೇಂದ್ರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಮಂಜೂರಾಗಿತ್ತು. ಆಗ ನಡೆದ ಹೋರಾಟದಲ್ಲಿ ಸ್ಥಳೀಯ ಪ್ರಮುಖರು ಸುಂಟಿಕೊಪ್ಪ ಪಂಚಾಯಿತಿಯಲ್ಲಿ ನಂದಿನಿ ಕ್ಷೀರ ಕೇಂದ್ರಕ್ಕೆ ಶಾಶ್ವತ ಜಾಗ ಮಂಜೂರಿಗೆ ಸಾಕಷ್ಟು ಶ್ರಮಿಸಿದ್ದರು. ಬಳಿಕ ನಂದಿನಿ ಕ್ಷೀರಕೇಂದ್ರವು ದುಪ್ಪಟ್ಟು ಬೆಲೆಗೆ ಹರಾಜಾಗಿತ್ತು. ಕೆಲ ತಿಂಗಳ ಕಾಲ ವಹಿವಾಟು ನಡೆಸಿದ ಹರಾಜು ಹೊಂದಿದವರು ವ್ಯವಹಾರ ಕೈಗೂಡದ ಹಿನ್ನಲೆಯಲ್ಲಿ ಇನ್ನೊಬ್ಬರಿಗೆ ಪರಭಾರೆ ಮಾಡಿದರು. ಅವರಿಗೂ ವ್ಯಾಪಾರ ಕೈಗೂಡದ ಹಿನ್ನಲೆಯಲ್ಲಿ ನಂದಿನಿ ಕ್ಷೀರ ಕೇಂದ್ರವು ಯಾರಿಗೂ ಬೇಡದಂತಾಗಿ ಮುಚ್ಚಲ್ಪಟ್ಟಿದೆ. ಕೆಎಂಎಫ್ ಒಡೆತನದ ನಂದಿನಿ ಉತ್ಪನ್ನಗಳು ನಗರದಲ್ಲಿ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿದ್ದು, ಜನಮಾನಸದಲ್ಲಿ ಹೆಸರುವಾಸಿಯಾಗಿದೆ. ಬದಲಾದ ಕಾಲಘಟ್ಟದಲ್ಲಿ ಹಳ್ಳಿಗಳಲ್ಲಿ ಕೂಡ ಪಶುಸಂಗೋಪನೆ ಹಿನ್ನಡೆ ಕಂಡಿರುವ ಹಿನ್ನಲೆಯಲ್ಲಿ ನಂದಿನಿ ಉತ್ಪನ್ನಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಸಾಮಾನ್ಯವಾಗಿ ನಂದಿನಿ ಉತ್ಪನಗಳು ನಿಗದಿತ ಬೆಲೆಗೇ ಮಾರಾಟವಾಗುತ್ತಿದ್ದು, ಖಾಸಗಿ ಮತ್ತು ಇತರ ಏಜನ್ಸಿಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬೆಲೆ ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ಮತ್ತು ಖಾಯಂ ಗ್ರಾಹಕರಿಗೆ ನಂದಿನಿ ಕ್ಷೀರ ಕೇಂದ್ರ ಮುಚ್ಚಿರುವುದು ನಷ್ಟವಾಗಿ ಪರಿಣಮಿಸಿದೆ. ಕ್ವೋಟ್‌.... ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದು 7 ಗ್ರಾಮ ಪಂಚಾಯಿತಿ ಒಳಗೊಂಡಿದ್ದು, ಈ ಭಾಗದ ನಿವಾಸಿಗಳು ವ್ಯಾಪಾರ ವಹಿವಾಟಿಗೆ ಸುಂಟಿಕೊಪ್ಪ ಅವಲಂಬಿತರಾಗಿದ್ದಾರೆ. ಕ್ಷೀರ ಕೇಂದ್ರ ಮುಚ್ಚಿರುವ ಹಿನ್ನೆಲೆಯಲ್ಲಿ ನಂದಿನಿ ಉತ್ಪನಗಳನ್ನು ಕೊಂಡುಕೊಳ್ಳಬೇಕಾದರೆ ದುಬಾರಿ ಹಣ ತೆರಬೇಕಾಗುತ್ತದೆ. ಕೆಎಂಎಫ್ ಕೇಂದ್ರದ ಅಧಿಕಾರಿಗಳು ಗಮನಹರಿಸಿ ಕ್ಷೀರ ನಂದಿನಿ ಕೇಂದ್ರ ಪುನಾರಂಭಿಸಲು ಮುಂದಾಗಬೇಕು. -ನಾಗೇಶ್‌ ಪೂಜಾರಿ, ಕನ್ನಡ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷ. ದಿನದಿಂದ ದಿನಕ್ಕೆ ಸುಂಟಿಕೊಪ್ಪ ಪಟ್ಟಣವು ಜನದಟ್ಟಣೆ ಹೆಚ್ಚಾಗುತ್ತಿದ್ದು ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ತೆರೆಯಲಾದ ನಂದಿನಿ ಕ್ಷೀರ ಕೇಂದ್ರವನ್ನು ಲಕ್ಷಾಂತರ ರು. ವ್ಯಯಿಸಿ ಸುಂಟಿಕೊಪ್ಪ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಕೆಲವು ತಿಂಗಳು ಹಿಂದೆಯೇ ಕ್ಷೀರ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನಾನೂಕೂಲವಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಕ್ಷೀರ ಕೇಂದ್ರ ಕೂಡಲೇ ಪುನಾರಂಭಿಸಲು ಕೆಎಂಎಫ್ ಅಧಿಕಾರಿಗಳು ಗಮನಹರಿಸಬೇಕು. -ಪಿ.ಆರ್.ಸುನಿಲ್‌ ಕುಮಾರ್‌, ಗ್ರಾ.ಪಂ.ಅಧ್ಯಕ್ಷ. ------ ಪರಿಶೀಲಿಸಿ ಕ್ರಮದ ಭರವಸೆ ಸುಂಟಿಕೊಪ್ಪ ಕ್ಷೀರ ಕೇಂದ್ರವನ್ನು ಮುಚ್ಚಿರುವುದು ಗಮನಕ್ಕೆ ಬಂದಿರುವುದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಕೂಡಿಗೆಯ ನಂದಿನಿ ಕ್ಷೀರ ಕೇಂದ್ರದ ವ್ಯವಸ್ಥಾಪಕರು ತಿಳಿಸಿದರು.