ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮನೆ ಕಳ್ಳತನ ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್-ಎಲ್ಎಚ್ಬಿಎಸ್’ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀಗಹಾಕಿದ ಮನೆಗಳ ಸುರಕ್ಷತೆಯ ಸಂಬಂಧ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟಿದ್ದಾಗ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸಾಪ್ ಮೂಲಕ ಎಲ್ಎಚ್ಬಿಎಸ್ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-8277982901ಕ್ಕೆ ಅಪ್ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಂದರು.
ಸಾರ್ವಜನಿಕರು ತಾವು ಪ್ರವಾಸಕ್ಕೆ ಹೊರಟಾಗ ತಮ್ಮ ಗೇಟಿಗೆ ಲಾಕ್ ಮಾಡುವುದು ಮತ್ತು ಮನೆಯ ಮುಂದೆ ಪೇಪರ್ಗಳ ರಾಶಿ, ಹಾಲಿನ ಪ್ಯಾಕೇಟ್ ಬಿದ್ದಿರುವುದು ಮತ್ತು ತಾವು ಹೋದ ಪ್ರವಾಸ ತಾಣಗಳ ಸ್ಟೇಟಸ್ ಅನ್ನು ಹಾಕುವುದು ಸೇರಿದಂತೆ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗ್ರತರಾದರೆ ಅನೇಕ ಪ್ರಕರಣಗಳು ಕಮ್ಮಿಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಮತ್ತು ಪೊಲೀಸರ ಎಲ್ಹೆಚ್ಬಿಎಸ್ಗೆ ಸಹಕಾರ ನೀಡಬೇಕು ಎಂದರು.ಜಿಲ್ಲೆಯಲ್ಲಿ ಮಾದಕದ್ರವ್ಯ ಗಾಂಜಾ ವಿರುದ್ಧ ಈ ವರ್ಷ ಜನವರಿ 1 ರಿಂದ ಮಾದಕ ದ್ರವ್ಯ ಸೇವೆನೆ 266 ಪ್ರಕರಣ ದಾಖಲಿಸಲಾಗಿದೆ. 18 ಪ್ರಕರಣಗಳಲ್ಲಿ 40 ಆರೋಪಿತರನ್ನು ಬಂಧಿಸಿ, ಅವರಿಂದ ಮಾದಕದ್ರವ್ಯ ಅಮಾನತುಪಡಿಸಲಾಗಿದೆ. ಒಟ್ಟು 280 ಪ್ರಕರಣಗಳಲ್ಲಿ 330 ಜನ ಆರೋಪಿತರನ್ನು ಬಂಧಿಸಿ, 27,37,000 ರು. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಾದಕ ವಸ್ತು ವಿತರಿಸುವ ಮೂರು ಮಾರ್ಗಗಳನ್ನು ಮೂಲದಲ್ಲೇ ಬಂದ್ ಮಾಡಲಾಗಿದೆ. ಇನ್ನೂ ಮೂರು ವಿತರಕರ ಸುಳಿವು ದೊರೆತ್ತಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಗಾಂಜಾ ಪ್ರಕರಣಗಳಲ್ಲಿ 52ಜನ ಬಂಧಿತ ಆರೋಪಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಅವರು ಈಗ ದುಶ್ಚಟದಿಂದ ಮುಕ್ತರಾಗಿದ್ದಾರೆ ಎಂದರು.
ಮಹಿಳೆಯರು, ಮಕ್ಕಳ ರಕ್ಷಣೆಗೆ ಅಕ್ಕಪಡೆ:
ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸುವ ಉದ್ದೇಶದಿಂದ ನಗರದಲ್ಲಿ ಅಕ್ಕಪಡೆಯು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಉಪಟಳ ನೀಡಿದ ಒಟ್ಟು 156 ಜನ ಅಸಾಮಿಗಳ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.ನ್ಯಾಯಾಲಯದಲ್ಲಿ ಜನವರಿ 1 ರಿಂದ ಇದೂವರೆಗೆ ಒಟ್ಟು 27 ಘೋರ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇದರಲ್ಲಿ ಕೊಲೆ-2 , ಕೊಲೆಯತ್ನ-6, ಸುಲಿಗೆ-1, ಎಸ್ಸಿ/ಎಸ್ಟಿ-5+1, ಪೋಕ್ಸೋ -4, 498 (ಎ)-304 (ಬಿ)-2, ಐಟಿಪಿ-1, 279, 427, ಐಪಿಸಿ-139, 135 ಎಲೆಕ್ಟ್ರಿಸಿಟಿ ಕಾಯ್ದೆ-1, ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ, ಉಪಾಧೀಕ್ಷಕರಾದ ಅಂಜನಪ್ಪ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.ಸುಳ್ಳು ಸುದ್ಧಿ ಹರಡುವವರ ವಿರುದ್ದ ಕಠಿಣ ಕ್ರಮ
ಸಮಾಜದ ಹಿತದೃಷ್ಠಿಯಿಂದ ಮಾಧ್ಯಮದವರಾಗಲಿ, ಸಾರ್ವಜನಿಕರಾಗಲಿ, ಸುಳ್ಳುಸುದ್ದಿ ಹಬ್ಬಿಸಿದರೆ ಅಥವಾ ಪ್ರಚೋದನಾತ್ಮಕ ವೀಡಿಯೋಗಳನ್ನು ಪಾರ್ವರ್ಡ್ ಮಾಡಿದರೆ ಅವರಿಗೆ ನೋಟೀಸ್ ನೀಡಿ, ಕಠಿಣಕ್ರಮ ಕೈಗೊಳ್ಳಲಾಗುವುದು. ಮಾಧ್ಯಮದವರು ಕೂಡ ಸುದ್ಧಿ ಭಿತ್ತರಿಸುವ ಮುನ್ನ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.