ಧಾರವಾಡದ ನಗರದ ಭಾರತಿ ನಗರದ ಮನೆ ಮತ್ತು ಐಸ್‌ಗೇಟ್‌ ಬಳಿ ಇರುವ ಭೂಮಾಪನ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಮುರಗೋಡದ ಸಿದ್ದನಗೌಡರ ಮನೆ ಮೇಲೂ ದಾಳಿ ನಡೆದಿದೆ.

ಧಾರವಾಡ:

ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿಯ ಭೂಮಾಪನ ಇಲಾಖೆಯಲ್ಲಿ ಕಚೇರಿ ಮೇಲ್ವಿಚಾರಕ ಹುದ್ದೆಯಲ್ಲಿರುವ ಎಸ್‌.ಎಫ್‌. ಸಿದ್ದನಗೌಡರ ಮನೆ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ನಗರದ ಭಾರತಿ ನಗರದ ಮನೆ ಮತ್ತು ಐಸ್‌ಗೇಟ್‌ ಬಳಿ ಇರುವ ಭೂಮಾಪನ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಮುರಗೋಡದ ಸಿದ್ದನಗೌಡರ ಮನೆ ಮೇಲೂ ದಾಳಿ ನಡೆದಿದೆ.

ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬೆಳಗ್ಗೆಯಿಂದ ಸಂಜೆ ವರೆಗೂ ಸಿದ್ದನಗೌಡರ ಅವರ ಆಸ್ತಿ ದಾಖಲೆಗಳು ವಶಕ್ಕೆ ಪಡೆದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಒಂದು ಮನೆ, ಮೂರು ನಿವೇಶನ, 3 ಎಕರೆ ಜಮೀನು, ₹ 82 ಸಾವಿರ ನಗದು, ₹ 35 ಲಕ್ಷ ಮೌಲ್ಯದ 443 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ, ₹ 15 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ₹ 2.64 ಕೋಟಿ ಆಸ್ತಿ ಪತ್ತೆಯಾಗಿದೆ. ಆದರೆ, ಈ ಪೈಕಿ ₹ 1.80 ಕೋಟಿ ಅಕ್ರಮ ಆಸ್ತಿ ಎಂದು ಗುರುತಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದರು.