ಶಿರಹಟ್ಟಿ: ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮರಿಗೌಡ ಸುರಕೋಡ ಅವರು ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಗದಗ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾದ ಹಿನ್ನೆಲೆ ಧಾರವಾಡದ ಲೋಕಾಯುಕ್ತ ಅಧಿಕಾರಿಗಳು ಸ್ಥಳೀಯ ಬಿಸಿಎಂ ಕಚೇರಿ ಸೇರಿದಂತೆ ಸಂಬಂಧಿತ ೬ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.ಈ ಕುರಿತು ಧಾರವಾಡ ಲೋಕಾಯುಕ್ತ ಕಚೇರಿಯ ಇನ್ಸ್‌ಪೆಕ್ಟರ್‌ ಬಸವರಾಜ ಬುದ್ನಿ ನೇತೃತ್ವದ ತಂಡ ಬೆಳ್ಳಂಬೆಳಗ್ಗೆ ಶಿರಹಟ್ಟಿಯ ಕಾರ್ಯಾಲಯದ ಕಡತಗಳ ತಪಾಸಣೆಗೆ ಆಗಮಿಸಿದ್ದರು. ರಾಮದುರ್ಗದ ಮನೆ, ರೋಣ ತಾಲೂಕು ಕೌಜಗೇರಿ ಮನೆ, ಗದಗ ವಿಶ್ವೇಶ್ವರ ನಗರದಲ್ಲಿರುವ ಅಧಿಕಾರಿಯ ನಿವಾಸ ಸೇರಿದಂತೆ ಒಟ್ಟು ೬ ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಸೇವಾ ಅವಧಿಯಲ್ಲಿ ಅಕ್ರಮವಾಗಿ ಅಪಾರ ಆಸ್ತಿ ಗಳಿಸಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಗದಗ ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಹಿರಿಯ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮನೆಗಳು, ಕಚೇರಿಗಳು ಸೇರಿದಂತೆ ಸಂಬಂಧಿತ ಸ್ಥಳಗಳಲ್ಲಿ ದಾಖಲೆಗಳು, ಬ್ಯಾಂಕ್ ಪಾಸ್ಬುಕ್, ಭೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಶಿರಹಟ್ಟಿ ಕಚೇರಿ ಮೇಲೆ ದಾಳಿ ನಡೆದ ವೇಳೆ ಲೋಕಾಯುಕ್ತ ಇಲಾಖೆಯ ತೇಜಸ್ವಿ, ಸಂಜೀವ ಗಾಳಿ, ಕಲ್ಮೇಶ ಸೇರಿದಂತೆ ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿ ಪತ್ತೆ

ಗದಗ: ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮರಿಗೌಡ ಸುರಕೋಡ ಅವರ ಬಳಿ ಅಧಿಕೃತ ಆದಾಯಕ್ಕಿಂತ ಶೇ. 227ರಷ್ಟು ಹೆಚ್ಚಿನ ಆಸ್ತಿ ಇರುವುದು ಲೋಕಾಯುಕ್ತ ದಾಳಿಯಿಂದ ಪತ್ತೆಯಾಗಿದೆ. ಒಟ್ಟು ಅಕ್ರಮ ಆಸ್ತಿಯ ಮೌಲ್ಯ ಸುಮಾರು ₹1,82,33,566 ಎಂದು ಅಂದಾಜಿಸಲಾಗಿದೆ.

ದಾಳಿಯ ಸಂದರ್ಭದಲ್ಲಿ ₹1.38 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳಿದ್ದು, ಇದರಲ್ಲಿ 6 ನಿವೇಶನಗಳು(ಮೌಲ್ಯ ₹13 ಲಕ್ಷ), ಒಂದು ಮನೆ (ಮೌಲ್ಯ ₹45 ಲಕ್ಷ) ಹಾಗೂ 29 ಎಕರೆ ಕೃಷಿ ಭೂಮಿ(ಮೌಲ್ಯ ₹80.77 ಲಕ್ಷ) ಸೇರಿವೆ. ಇನ್ನುಳಿದಂತೆ ₹89250 ನಗದು, 152.96 ಗ್ರಾಂ ಚಿನ್ನ(ಮೌಲ್ಯ ₹23.21 ಲಕ್ಷ) ಹಾಗೂ 893 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಅಲ್ಲದೇ ಸುಮಾರು ₹33.45 ಲಕ್ಷ ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.


ಮನೆಯಲ್ಲಿ ಸರ್ಕಾರಿ ಸಾಮಗ್ರಿಗಳು

ದಾಳಿಯ ವೇಳೆ ಆರೋಪಿತ ಅಧಿಕಾರಿಯ ಮನೆಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಸರಬರಾಜು ಮಾಡಬೇಕಿದ್ದ ನೋಟ್ ಪುಸ್ತಕಗಳು, ಬೆಡ್‌ಶೀಟ್‌ಗಳು, ಹಾಸಿಗೆಗಳು ಹಾಗೂ ಅಡುಗೆ ಪಾತ್ರೆಗಳು ಪತ್ತೆಯಾಗಿವೆ. ಬಿಸಿಎಂ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಮಗ್ರಿಗಳ ಪರಿಶೀಲನೆ ನಡೆಸಿದ್ದಾರೆ.ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.