ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

| Published : Jun 13 2025, 02:31 AM IST

ಸಾರಾಂಶ

ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಗಳಿಗೆ ಏಕಕಾಲಕ್ಕೆ ದಾಳಿಮಾಡಿ ಹಲವು ದಾಖಲೆಗಳ ಪರಿಶೀಲನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಗುರುವಾರ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಜಿಲ್ಲಾ ಲೋಕಾಯುಕ್ತ ಅಧೀಕ್ಷಕರಾದ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರ ತಂಡ ಜಿಲ್ಲಾ ನೋಂದಣಾಧಿಕಾರಿ ಸೇರಿದಂತೆ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಗಳಿಗೆ ಏಕಕಾಲಕ್ಕೆ ದಾಳಿಮಾಡಿ ಹಲವು ದಾಖಲೆಗಳ ಪರಿಶೀಲನೆ ನಡೆಸಿದೆ. ಭ್ರಷ್ಟಾಚಾರ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿ ಸೇರಿದಂತೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಲೋಕಾಯುಕ್ತರು ಏಕಕಾಲಕ್ಕೆ ಜಿಲ್ಲೆಯ ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಹಲವು ಅವ್ಯವಸ್ಥೆ ಬೆಳಕಿಗೆ:

ಲೋಕಾಯುಕ್ತರ ದಾಳಿಯ ವೇಳೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತದ ಬಗ್ಗೆ ಫಲಕ ಹಾಕದಿರುವುದು, ದೂರು ಮತ್ತು ಸಲಹಾ ಪೆಟ್ಟಿಗೆಯನ್ನು ಇರಿಸದಿರುವುದು. ಸಿಸಿ ಕ್ಯಾಮರಾ ಇಲ್ಲದೆ ಇರುವುದು, ಮಧ್ಯವರ್ತಿಗಳ ಹಾವಳಿ ಸೇರಿದಂತೆ ಸಾಲು ಸಾಲು ಲೋಪಗಳು ಸೇರಿದಂತೆ ಹಲವು ಅವ್ಯವಸ್ಥೆಗಳು ಬೆಳಕಿಗೆ ಬಂದವು. ಚನ್ನಪಟ್ಟಣದಲ್ಲಿ ಮಧ್ಯವರ್ತಿ ಹಾವಳಿ:

ಲೋಕಾಯುಕ್ತ ದಾಳಿಯ ವೇಳೆ ಚನ್ನಪಟ್ಟಣ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡದಿರುವುದು. ಸಾರ್ವಜನಿಕರಿಗೆ ಕೆಲಸವನ್ನು ವಿಳಂಭ ಮಾಡುತ್ತಿರುವುದು ಕಂಡು ಬಂದಿದೆ.ಇದರ ಜತೆಗೆ ಮಧ್ಯವರ್ತಿಗಳ ಹಾವಳಿ ತೀವ್ರವಾಗಿರುವುದು ಬೆಳಕಿಗೆ ಬಂದಿದೆ.

ಇನ್ನು ರಾಮನಗರ ಕಚೇರಿಯಲ್ಲಿ ದಾಖಲೆಗಳ ಅಸಮರ್ಪಕ ನಿರ್ವಹಣೆ, ಸಲಹಾ ಪೆಟ್ಟಿಗೆ ಇಲ್ಲದೆ ಇರುವುದು, ಕನಕಪುರ ಕಚೇರಿಯಲ್ಲಿ ವಿಕಲ ಚೇತನರಿಗೆ ರ್‍ಯಾಂಪ್ ಇಲ್ಲದೆ ಇರುವುದು. ಮಾಗಡಿಯಲ್ಲಿ ಸಾರ್ವಜನಿಕ ಶೌಚಾಲಯ ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದು ಸೇರಿದಂತೆ ಪ್ರತಿಯೊಂದು ಉಪನೋಂದಣಾಧಿಕಾರಿ ಕಚೇರಿಯಲ್ಲೂ ಸಾಕಷ್ಟು ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಇನ್ನು ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಸಹ ಸಿಸಿ ಟಿವಿ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ.ಇನ್ನು ಲೋಕಾಯುಕ್ತ ದಾಳಿವೇಳೆ ಜಿಲ್ಲೆಯಾದ್ಯಂತ ಸಾರ್ವಜನಿಕರು ತಮ್ಮ ಸಮಸ್ಯೆಗಳ ಜತೆಗೆ ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ.ಪೊಟೋ೧೨ಸಿಪಿಟಿ೧: ಉಪನೋಂದಣಾಧಿಕಾರಿ ಕಚೇರಿಗೆ ಲೋಕಾಯುಕ್ತರು ದಾಳಿನಡೆಸಿರುವುದು.