ಸಾರಾಂಶ
ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕು ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು.
ರಾಮನಗರ:
ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕುರಿತು ನಿಗಾವಹಿಸಬೇಕಾದ ಅಧಿಕಾರಿಗಳ ದುರಾಡಳಿತ ಮತ್ತು ಕರ್ತವ್ಯಲೋಪದ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಪಿ.ವಿ. ಸ್ನೇಹಾರವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಂಗಳವಾರ ಏಕಕಾಲದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.ಜಿಲ್ಲೆಯ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕು ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು, ಕಚೇರಿ ಹಾಜರಾತಿ ಪುಸ್ತಕ , ನಗದು ಘೋಷಣಾ ವಹಿ, ಚಲನ ವಲನಾ ವಹಿ, ಸಕಾಲ ಸರ್ವಿಸ್ , ಆರ್ ಟಿಐ, ರಿಜಿಸ್ಟರ್ ಹಾಗೂ ದಾಖಲೆಗಳನ್ನು ಪರಿಶೀಲಿಸಿದರು.
ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಫಲಕ, ಸಲಹಾ ಪೆಟ್ಟಿಗೆ, ತಾಲೂಕು ಕಚೇರಿಯಲ್ಲಿ ಉಂಟಾಗುವ ಸರ್ವರ್ ಸಮಸ್ಯೆ ಹಾಗೂ ತಾಲೂಕು ಕಚೇರಿಯಲ್ಲಿ ಎಲ್ಲ ಮೂಲ ಸೌಲಭ್ಯಗಳನ್ನು ವೀಕ್ಷಿಸಿದರು. ಅಲ್ಲದೆ, ಮಧ್ಯವರ್ತಿ - ದಲ್ಲಾಳಿಗಳ ಹಾವಳಿ ಬಗ್ಗೆಯೂ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.ತಾಲೂಕು ಕಚೇರಿಗಳಲ್ಲಿ ದೊರೆಯುವ ಸೇವೆಗಳ ಬಗ್ಗೆ ಫಲಕ ಹಾಕದಿರುವುದು. ಹಾಜರಾತಿ ಪುಸ್ತಕ ಸಹಿ ಮಾಡದೆ ಇರುವುದು, ನಗದು ಘೋಷಣಾ ವಹಿಯನ್ನು ಮತ್ತು ಚಲನ ವಲನಾ ವಹಿ ನಿರ್ವಹಣೆ ಮಾಡದಿರುವುದು. ಸಾರ್ವಜನಿಕರು ಮತ್ತು ನೌಕರರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು. ಕೆಲಸದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು. ನೌಕರರು ಗುರುತಿನ ಚೀಟಿ ಹಾಕದಿರುವುದು ಲೋಕಾಯುಕ್ತರ ದಾಳಿ ವೇಳೆ ಕಂಡು ಬಂದಿದೆ.
18ಕೆಆರ್ ಎಂಎನ್ 13.ಜೆಪಿಜಿಲೋಕಾಯುಕ್ತರು ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.