ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪಾರದರ್ಶಕ ಆಡಳಿತ, ಜನಸಾಮಾನ್ಯರಿಗೆ ಹತ್ತಿರವಾಗಿ ಕೆಲಸ ಮಾಡುವ ಹಾಗೂ ಉತ್ತಮ ಕೆಲಸ ಮಾಡುವವರಿಗೆ ಲೋಕಾಯುಕ್ತ ಇಲಾಖೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.ಜಿಲ್ಲೆಯ ಜಮಖಂಡಿ ತಾಲೂಕಿನ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸೋಮವಾರ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳ್ಳೆಯ ಕೆಲಸ ಮಾಡುವವರಿಗೆ ಲೋಕಾಯುಕ್ತ ಬೆನ್ನೆಲುಬಾಗಿ ಕೆಲಸ ಮಾಡಲಿದ್ದು, ತಪ್ಪು ಮಾಡುವವರಿಗೆ ಶಿಕ್ಷೆ ಕೂಡ ವಿಧಿಸಲಾಗುತ್ತದೆ. ಅಡಕೆ ಕದ್ದವರು ಹಾಗೂ ಆನೆ ಕದ್ದವರು ಅಂದರೆ ಅವರವರ ತಪ್ಪುಗಳಿಗೆ ತಕ್ಕಂತೆ ಶಿಕ್ಷೆ ನೀಡಲಾಗುತ್ತದೆ ಎಂಬ ಹೇಳಿದರು.
ಕಂದಾಯ ಇಲಾಖೆ ಸೇವೆಗಳು ತ್ವರಿತಗತಿಯಲ್ಲಿ ಆಗಬೇಕು. ಹೆಚ್ಚಿನ ಜನರಿಗೆ ಸೇವೆ ಒದಗಿಸಲು ಮುಂದಾಗಬೇಕು. ಬರ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಬಿದ್ದವರಿಗೆ ಎ.ಬಿ. ಮತ್ತು ಸಿ ವರ್ಗಗಳಲ್ಲಿ ಪರಿಹಾರ ಪಡೆಯುವಲ್ಲಿ ತಪ್ಪು ಮಾಹಿತಿ ನೀಡಿದ್ದರೆ ಅಂತವರ ಮೇಲೆ ಇಲಾಖೆ ಸೂಕ್ತ ಕ್ರಮಜರುಗಿಸಲು ತಿಳಿಸಿದ ಲೋಕಾಯುಕ್ತರು, ಕಂದಾಯ ಇಲಾಖೆ ಸಕಾಲ ಸೇವೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಭೂಮಿ ಸೇವೆಯಲ್ಲಿ 3ನೇ ಸ್ಥಾನ ಪಡೆದಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಜನರ ಸೇವೆಗಳು ತ್ವರಿತಗತಿಯಲ್ಲಿ ನಡೆಯಬೇಕು. ಸರ್ವೆಗೆ ಸಂಬಂಧಿಸಿದಂತೆ ಅರ್ಜಿಗಳು ತುರ್ತು ವಿಲೇ ಮಾಡಿ ಸಂಬಂಧಿಸಿದ ದಾಖಲೆ ಸಂಗ್ರಹಿಸಿಟ್ಟುಕೊಳ್ಳುವಂತೆ ಜನರಿಗೆ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಆಗಬಾರದು. ಆ ನಿಟ್ಟಿನಲ್ಲಿ ವೈದ್ಯರ ನೇಮಕ ಅವಶ್ಯಕ ಪರಿಕರಗಳ ಒದಗಿಸುವ ಕಾರ್ಯ ಹಾಗೂ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಕಾಪಾಡಲು ತಿಳಿಸಿದ ಅವರು, ವೈದ್ಯರು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗ ಆಸ್ಪತ್ರೆಗಳಲ್ಲಿ ಹಾಜರಿದ್ದು, ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಕಾರ್ಯವಾಗಬೇಕು ಎಂದರು.
ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಒತ್ತುವರಿ ತೆರವುಗೊಳಿಸಿ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದನೆ ನೀಡಿ ಬಗೆಹರಿಸುವ ಕಾರ್ಯವಾಗಬೇಕು. ವಸತಿ ನಿಲಯಗಳಲ್ಲಿ ಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ತಿಳಿಸಿದ ಅವರು, ಜನಸ್ನೇಹಿ ಆಡಳಿತ, ಜನರ ಪರವಾಗಿ ಕೆಲಸ ಮಾಡುವಂತಾಗಬೇಕು. ಭ್ರಷ್ಟಾಚಾರದ ವಿರುದ್ಧ ಗಟ್ಟಿಯಾದ ನಿಲುವು ಸಹ ತಾಳಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಲೋಕಾಯುಕ್ತರಾದ ಬಾಗಲಕೋಟೆ ಲೋಕಾಯುಕ್ತ ಎಸ್.ಪಿ. ಶಂಕರ ರಾಗಿ, ವಿಜಯಪುರ ಲೋಕಾಯುಕ್ತ ಎಸ್.ಪಿ. ಟಿ.ಮಲ್ಲೇಶ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ್ ಸದಾಶಿವ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಪೂರ್ವದಲ್ಲಿ ಜಮಖಂಡಿ ವ್ಯಾಪ್ತಿಯಲ್ಲಿ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.