ರಾಜಧಾನಿ ಬೆಂಗಳೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಲಂಡನ್ ಮಾದರಿಯಲ್ಲಿ ‘ಅಂಬಾರಿ ಡಬಲ್ ಡೆಕ್ಕರ್ ಬಸ್ಸು’ಗಳ ಸಂಚಾರ ಆರಂಭಿಸಲು ಮುಂದಾಗಿದೆ. ಮೂರು ಬಸ್ಸುಗಳು ಬುಧವಾರದಿಂದಲೇ ಕಾರ್ಯಾಚರಣೆ ಶುರುಮಾಡಲಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಲಂಡನ್ ಮಾದರಿಯಲ್ಲಿ ‘ಅಂಬಾರಿ ಡಬಲ್ ಡೆಕ್ಕರ್ ಬಸ್ಸು’ಗಳ ಸಂಚಾರ ಆರಂಭಿಸಲು ಮುಂದಾಗಿದೆ. ಮೂರು ಬಸ್ಸುಗಳು ಬುಧವಾರದಿಂದಲೇ ಕಾರ್ಯಾಚರಣೆ ಶುರುಮಾಡಲಿವೆ.ಈ ಹಿಂದೆ ಬೆಂಗಳೂರಿಗೆ ಬರುವ ಪ್ರವಾಸಿಗರ ದೃಷ್ಟಿಯಿಂದ ಬಿಎಂಟಿಸಿಯಿಂದ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರ ನಡೆಸಲಾಗಿತ್ತು. ಕಾಲಾನಂತರ ಈ ಬಸ್ಸುಗಳ ಸಂಚಾರವನ್ನು ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಇದೀಗ ಕೆಎಸ್ಟಿಡಿಸಿಯಿಂದ ಬೆಂಗಳೂರಿನ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಲು ಲಂಡನ್ ಮಾದರಿಯಲ್ಲಿ ಮೂರು ಡಬಲ್ ಡೆಕ್ಕರ್ ಬಸ್ಸುಗಳನ್ನು ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ. ಈ ಬಸ್ಸುಗಳು ಲಾಲ್ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ, ಕೆ.ಆರ್.ಮಾರುಕಟ್ಟೆ , ಟಿಪ್ಪು ಸ್ತುಲ್ತಾನ್ ಬೇಸಿಗೆ ಅರಮನೆ ಸೇರಿದಂತೆ ನಗರದ ಎಲ್ಲಾ ಪ್ರಮುಖ ಪ್ರವಾಸಿ ಸ್ಥಳಗಳ ಮಾರ್ಗದಲ್ಲಿ ಸಂಚರಿಸಲಿವೆ. ಪ್ರವಾಸಿಗರು ನಿಗಮದ ವೆಬ್ಸೈಟ್ ಮೂಲಕ ನಗರದ ಪ್ರವಾಸಕ್ಕೆ ಮುಂಗಡವಾಗಿ ಆನ್ಲೈನ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
