ಜಗತ್ತಿಗೆ ಅಹಿಂಸೆ, ಶಾಂತಿ ಮತ್ತು ಸಹನೆಯ ಮಾರ್ಗ ತೋರಿಸಿದ ಭಗವಾನ್ ಮಹಾವೀರರ ಸಂದೇಶ, ತತ್ವಗಳು, ಪ್ರಚಲಿತ ಜಗತ್ತು ಎದುರಿಸುವ ಸಮಸ್ಯೆಗಳಿಗೆ ಪರಿಹಾರದ ದಾರಿಯನ್ನು ತೋರುತ್ತವೆ

ಭಗವಾನ್ ಮಹಾವೀರ ಜಯಂತಿ ಆಚರಣೆಗೆ ಚಾಲನೆ ನೀಡಿದ ಶಾಸಕ

ಕನ್ನಡಪ್ರಭ ವಾರ್ತೆ ಹಳಿಯಾಳ

ಜಗತ್ತಿಗೆ ಅಹಿಂಸೆ, ಶಾಂತಿ ಮತ್ತು ಸಹನೆಯ ಮಾರ್ಗ ತೋರಿಸಿದ ಭಗವಾನ್ ಮಹಾವೀರರ ಸಂದೇಶ, ತತ್ವಗಳು, ಪ್ರಚಲಿತ ಜಗತ್ತು ಎದುರಿಸುವ ಸಮಸ್ಯೆಗಳಿಗೆ ಪರಿಹಾರದ ದಾರಿಯನ್ನು ತೋರುತ್ತವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಸೋಮವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ, ಶಿಕ್ಷಣ ಇಲಾಖೆ, ಪುರಸಭೆ ಹಾಗೂ ತಾಲೂಕಿನ ಜೈನ ಸಮುದಾಯದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಭಗವಾನ್ ಮಹಾವೀರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ರಾಜಮನೆತದಲ್ಲಿ ಜನಿಸಿದ ಮಹಾವೀರರು ರಾಜವೈಭೋಗವನ್ನು ಪರಿತ್ಯಾಗ ಮಾಡಿ, ಕ್ಷಣಿಕ ಸುಖ, ತೃಪ್ತಿ ನೀಡುವಂತಹ ಜಗತ್ತಿನ ವೈಭವಕ್ಕೆ ಬೆನ್ನು ತೋರಿ, ಶಾಶ್ವತ ನೆಮ್ಮದಿಯನ್ನು ನೀಡುವ ಶಾಂತಿ, ಪ್ರೀತಿಯ, ಅಹಿಂಸೆಯ ಬದುಕಿನ ಮಾರ್ಗದತ್ತ ಹೆಜ್ಜೆಯಿನ್ನಿಟ್ಟು, ನಮಗೆಲ್ಲರಿಗೂ ಆ ಸನ್ಮಾರ್ಗವನ್ನು ತೆರೆದಿಟ್ಟರು. ಈ ಮಾರ್ಗದಲ್ಲಿ ನಡೆದರೇ ಜಗತ್ತು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಗಳು ಪರಿಹಾರ ಕಾಣಬಲ್ಲವು. ನಾವು ಆದಷ್ಟು ಈ ಸನ್ಮಾರ್ಗದಲ್ಲಿ ನಡೆಯಲು ಮನಸ್ಸು ಮಾಡಬೇಕು ಎಂದರು.

ಜೈನ ಸಮಾಜದ ಪ್ರಮುಖರಾದ ಧರಣೇಂದ್ರ ಶಾಸ್ತ್ರೀಗಳು ಮಹಾವೀರ ಜೀವನದ ಬಗ್ಗೆ ಮಾಹಿತಿ ನೀಡಿದರು. ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಬಸವರಾಜ ಲಕ್ಕನಗೌಡ್ರ ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.ಬೈಕ್ ರ್‍ಯಾಲಿ:ಭಗವಾನ್ ಮಹಾವೀರ ಜಯಂತಿಯ ನಿಮಿತ್ತ ಸೋಮವಾರ ಹವಗಿ ಗ್ರಾಮದ ಬಸದಿಯಿಂದ ಹಳಿಯಾಳ ಪಟ್ಟಣದೆಲ್ಲೆಡೆ ಭವ್ಯ ಬೈಕ್ ರ್‍ಯಾಲಿ ನಡೆಯಿತು. ಭಗವಾನ ಪುತ್ಥಳಿಯನ್ನು ತೆಗೆದುಕೊಂಡು ಜೈನ ಸಮುದಾಯದವರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಹವಗಿ ಮತ್ತು ತೇರಗಾಂವ ಗ್ರಾಮದಲ್ಲಿನ ಬಸದಿಗಳಲ್ಲಿ ಮಹಾವೀರರ ಪ್ರತಿಮೆಗೆ ಪಂಚಾಮೃತ ಅಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ತೊಟ್ಟಿಲೋತ್ಸವ ನಡೆಸಲಾಯಿತು.