ಭಗವಾನ್ ಮಹಾವೀರರು ಜಗತ್ತಿಗೆ ಸಾರಿದ ಅಹಿಂಸೆ, ಶಾಂತಿ ಮತ್ತು ಸಮಾನತೆಯ ತತ್ವಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಅವು ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ಅಥಣಿ ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಗವಾನ್ ಮಹಾವೀರರು ಜಗತ್ತಿಗೆ ಸಾರಿದ ಅಹಿಂಸೆ, ಶಾಂತಿ ಮತ್ತು ಸಮಾನತೆಯ ತತ್ವಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಅವು ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ಅಥಣಿ ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.

​ಪಟ್ಟಣದಲ್ಲಿ ಜರುಗಿದ ಭಗವಾನ್ ಮಹಾವೀರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಅದ್ಧೂರಿ ಶೋಭಾಯಾತ್ರೆಗೆ ಧ್ವಜ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಪ್ರೇಮ, ಜೀವದಯೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದನ್ನು ಮಹಾವೀರರು ನಮಗೆ ಕಲಿಸಿಕೊಟ್ಟಿದ್ದಾರೆ. ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಅವರ ಸಂದೇಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಅಥಣಿಯ ಜೈನ ಬಾಂಧವರು ಇಷ್ಟು ಭಕ್ತಿ ಶ್ರದ್ಧೆಯಿಂದ ಈ ಉತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಹರ್ಷವ್ಯಕ್ತಪಡಿಸಿದರು.​ನಗರದ ಬೀದಿಗಳಲ್ಲಿ ಶೋಭಾಯಾತ್ರೆ ​ಇದೇ ಸಂದರ್ಭದಲ್ಲಿ ಶ್ರಾವಕ-ಶ್ರಾವಕಿಯರಿಂದ ಭಕ್ತಿಪೂರ್ವಕ ಶೋಭಾ ಯಾತ್ರೆಯು ಪಟ್ಟಣದ ಪ್ರಮುಖ ವೃತ್ತಗಳಾದ ಶಿವಯೋಗಿ ಸರ್ಕಲ್, ಅಂಬೇಡ್ಕರ್ ವೃತ್ತ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೈನ ಮಂದಿರದವರೆಗೆ ಸಾಗಿತು. ಯಾತ್ರೆ ಯುದ್ದಕ್ಕೂ ಮಹಾವೀರರ ಜಯ ಘೋಷಗಳು ಮೊಳಗಿದವು.ಈ ವೇಳೆ ಜೈನ ಸಮಾಜದ ಮುಖಂಡ ಹಾಗೂ ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರಾದ ಅರುಣಕುಮಾರ ಯಲಗುದ್ರಿ, ಎಸ್.ಬಿ.ಲಠ್ಠೆ, ಕೆ.ಎ.ವನಜೋಳ, ಅಮರ ದುರ್ಗಣ್ಣವರ, ಡಿ.ಡಿ.ಮೆಕನಮರಡಿ, ಅಭಿನಂಧನ ಪಡನಾಡ, ಎಸ್.ಎಸ್.ಮಾಕಾಣಿ, ಮಹಾವೀರ ಜಕನೂರ, ರಾಜು ಕರ್ಪೂರಶೆಟ್ಟಿ, ಪ್ರಫುಲ ಪಡನಾಡ, ಸಂತೋಷ ಬಮಣ್ಣವರ, ಸಾತಗೌಡ ಅಥಣಿ, ನಾಗರಾಜ ಗೊಂಗಡಿ, ಪ್ರಶಾಂತ ಇಜಾರೆ, ನಿತೀನ ಗೊಂಗಡೆ, ಪ್ರತಿಭಾ ಮುಧೋಳ, ಶರ್ಮಿಳಾ ಪಾಟೀಲ, ಜಯಶ್ರೀ ಕಿನಿಂಗೆ, ಸುನಂದಾ ಪಡನಾಡ, ದೀಪಾ ನಂದಗಾಂವ ಸೇರಿದಂತೆ ನೂರಾರು ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.ಬಹುಮಾನ ವಿತರಣೆ:

​ಜೈನ ಮಂದಿರದಲ್ಲಿ ಭಗವಾನ್ ಮಹಾವೀರರ ನಾಮಕರಣ ಸಮಾರಂಭ ವಿಧಿವತ್ತಾಗಿ ಜರುಗಿತು. ಈ ವೇಳೆ ಆಯೋಜಿಸಲಾಗಿದ್ದ ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ರತ್ನಶ್ರೀ ಆಸ್ಪತ್ರೆಯ ಡಾ.ಅರುಣಾ ಬಾಹುಬಲಿ ಅಸ್ಕಿ ಅವರು ಬಹುಮಾನ ವಿತರಿಸಿದರು. ​ಹಂಸಗಾಮಿನಿ ಮಹಿಳಾ ಸಂಘದ ವತಿಯಿಂದ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಂಸ್ಕಾರ ಶಿಬಿರವು ಗಮನ ಸೆಳೆಯಿತು. ಶಿಬಿರದಲ್ಲಿ ಪಾಲ್ಗೊಂಡು ಜಯಗಳಿಸಿದ ಮಕ್ಕಳಿಗೆ ಗಣ್ಯರ ಹಸ್ತದಿಂದ ಪ್ರಶಸ್ತಿಪತ್ರ ಹಾಗೂ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ಶೋಭಾಯಾತ್ರೆಯಲ್ಲಿ ಶಾಸಕ ಸವದಿ, ಮುಖಂಡರು ಭಾಗಿ

ಅಥಣಿ ಪಟ್ಟಣದ ಬುಧವಾರ ಪೇಠದಲ್ಲಿರುವ ಜೈನ ಬಸವದಿಂದ ಶೋಭಾಯಾತ್ರೆಗೆ ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ ಚಾಲನೆ ನೀಡಿದರು. ವಿವಿಧ ವಾದ್ಯ ಮೇಳಗಳೊಂದಿಗೆ ಆರಂಭವಾದ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ತರಕಾರಿ ಮಾರುಕಟ್ಟೆಯಲ್ಲಿನ ಜೈನಮಂದಿರದಲ್ಲಿ ಸಮಾವೇಶಗೊಂಡಿತು. ಶೋಭಾಯಾತ್ರೆ ಮೆರವಣಿಗೆಯಲ್ಲಿ ಶಾಸಕ ಲಕ್ಷ್ಮಣ ಸವದಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಸದಾಶಿವ ಬುಟಾಳೆ, ಬಿಜೆಪಿ ಮುಖಂಡರಾದ ಪ್ರಕಾಶ ಕುಮಠಳ್ಳಿ, ಗಿರೀಶ ಬುಟಾಳೆ, ಸಂಪತ್‌ಕುಮಾರ ಶೆಟ್ಟಿ ಸೇರಿದಂತೆ ಸರ್ವ ಸಮಾಜದ ಹಿರಿಯ ಮುಖಂಡರು ದೇವರ ದರ್ಶನ ಪಡೆದು ಜೈನ ಸಮುದಾಯ ಬಂಧುಗಳಿಗೆ ಶುಭಾಶಯ ಕೋರಿದರು.

ಭಗವಾನ್ ಮಹಾವೀರರು ಈಡೀ ಮನುಕುಲಕ್ಕೆ ಅಹಿಂಸೆ, ಸತ್ಯದಂತ ಮೌಲ್ವಿಕ ತತ್ವಗಳನ್ನು ಸಾರಿರುವುದು ಸಾರ್ವಕಾಲಿಕವಾಗಿದೆ. ಇಂದಿನ ಯುವಕರು ಮಹಾವೀರರ ಸಂದೇಶಗಳನ್ನು ಅರ್ಥೈಸಿಕೊಂಡು ಆದರ್ಶ ಜೀವನ ನಡೆಸಬೇಕು. ಅಹಿಂಸೆಯ ಪಾಠ ಹೇಳಿಕೊಟ್ಟು ಜೀವನದ ಸಾಕ್ಷಾತ್ಕಾರದ ಪಥ ತೋರಿಸಿದ ಭಗವಾನ್ ಮಹಾವೀರರು ಎಲ್ಲರಿಗೂ ಒಳಿತನ್ನು ಬಯಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ.

-ಅರುಣಕುಮಾರ ಯಲಗುದ್ರಿ,
ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರು.