ಪ್ರಕೃತಿ ವಿಕೋಪ ಆಗುತ್ತಿರುವುದರಿಂದ ಪರಿಸರ ನಾಶದಿಂದಲೇ ಹೌದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರದ ರಕ್ಷಣೆಗೆ ಪಣ ತೊಡಬೇಕು.
ಧಾರವಾಡ:
ತೀವ್ರ ಉಷ್ಣ ತರಂಗಗಳ ಕಾರಣದಿಂದ ಸುತ್ತಲಿನ ತಾಪಮಾನ ಹೆಚ್ಚಳ, ಪ್ರವಾಹ, ಸಮುದ್ರ ಮಟ್ಟ ಏರಿಕೆಯಿಂದ ಜೀವ ವೈವಿಧ್ಯತೆ ನಾಶವಾಗುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕಿದೆ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ. ಬಸವರಾಜ ಹೇಳಿದರು.ಇಲ್ಲಿಯ ವಾಲ್ಮಿ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತು ಜಾಗೃತಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪ ಆಗುತ್ತಿರುವುದರಿಂದ ಪರಿಸರ ನಾಶದಿಂದಲೇ ಹೌದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರದ ರಕ್ಷಣೆಗೆ ಪಣ ತೊಡಲು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ಗಿರೀಶ ಮರಡ್ಡಿ, ವಿಶ್ವ ಪರಿಸರ ದಿನಾಚರಣೆಯನ್ನು ‘ಹವಾಮಾನಕ್ಕಾಗಿ ಕ್ರಮ’ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇದು ಹವಾಮಾನ ಬದಲಾವಣೆಯ ಪರಿಸ್ಥಿತಿ ಎದುರಿಸಲು ತ್ವರಿತ ಕ್ರಮಕೈಗೊಳ್ಳುವ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ನಿರೀಕ್ಷಿಸಿದ್ದು, ರೈತರು ಅವಶ್ಯಕತೆಗೆ ತಕ್ಕಂತೆ ಬೆಳೆಗಳಿಗೆ ನೀರೊದಗಿಸಲು ಸೂಕ್ಷ್ಮ ನೀರಾವರಿ ಪದ್ಧತಿ ಅನುಸರಿಸಬೇಕು. ಅಲ್ಲದೆ ಬೆಳೆ ಪರಿವರ್ತನೆ ಮಾಡಿ ಕಡಿಮೆ ನೀರು ಉಪಯೋಗಿಸಿಕೊಂಡು ಬೆಳೆಯಬಹುದಾದ ಅಲ್ಪಾವಧಿ ಲಾಭದಾಯಕ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆದು ಆರ್ಥಿಕ ಭದ್ರತೆ ಹೊಂದಬೇಕು ಎಂದು ಹೇಳಿದರು.ಸಹಾಯಕ ಪ್ರಾಧ್ಯಾಪಕಿ ಇಂದುಧರ ಹಿರೇಮಠ, ಹವಾಮಾನ ಬದಲಾವಣೆಯಿಂದ ದುಷ್ಪರಿಣಾಮ ಹಾಗೂ ಕೈಗೊಳ್ಳಬೇಕಾದ ಸಂರಕ್ಷಣಾ ಕ್ರಮಗಳ ಕುರಿತು ವಿವರಿಸಿದರು. ವಾಲ್ಮಿ ಸಂಸ್ಥೆಯಲ್ಲಿ ಪರಿಸರ, ಜಲ ಮತ್ತು ನೆಲ ಸಂರಕ್ಷಣೆ ಕುರಿತು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿಶ್ಲೇಷಿಸಿದರು. ಕೆ.ಎಸ್. ಸುಧೀಂದ್ರ, ಸುನೀಲ ಪತ್ರಿ, ನಾಗರಾಜ ತಹಶೀಲ್ದಾರ, ಪ್ರದೀಪ ದೇವರಮನಿ ಇದ್ದರು.