ಸಾರಾಂಶ
ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಸಿಐಓ) ವತಿಯಿಂದ ‘ಹ್ಯಾಂಡ್ಸ್ ಆನ್ ಸಾಯ್ಲ್, ಹಾರ್ಟ್ ವಿದ್ ಇಂಡಿಯಾ’ ಎಂಬ ರಾಷ್ಟ್ರೀಯ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ದೇಶದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಉದಾತ್ತ ಮೌಲ್ಯಗಳನ್ನು ಬಿತ್ತಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ನ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹಮ್ಮದ್ ರೋಣ್ ಹೇಳಿದರು.ಅವರು ನಗರದಲ್ಲಿ ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಸಿಐಓ) ವತಿಯಿಂದ ಅಯೋಜಿಸಿದ್ದ ‘ಹ್ಯಾಂಡ್ಸ್ ಆನ್ ಸಾಯ್ಲ್, ಹಾರ್ಟ್ ವಿದ್ ಇಂಡಿಯಾ’ ಎಂಬ ರಾಷ್ಟ್ರೀಯ ಅಭಿಯಾನದ ಸಮಾರೋಪ ಸಮಾರಂಭದಲ್ಇ ಮಾತನಾಡಿದರು.ಕಳೆದ ಒಂದು ತಿಂಗಳಿನಿಂದ ರಾಷ್ಟ್ರಾದ್ಯಂತ ಸಿಐಒ ವತಿಯಿಂದ ಮಕ್ಕಳ ಮೂಲಕ ಪರಿಸರ ಜಾಗೃತಿ, ಪ್ರಕೃತಿ ಸಂರಕ್ಷಣೆಯ ಕುರಿತು ವೈವಿದ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳು ತಮ್ಮ ತಮ್ಮ ಪರಿಸರದಲ್ಲಿ, ಶಾಲಾಕಾಲೇಜು, ಕಚೇರಿ, ಪಾರ್ಕು, ಉದ್ಯಾನವನ, ಮಸೀದಿ, ಮದ್ರಸಾ, ಮಂದಿರ, ಚರ್ಚ್, ವೃದ್ಧಾಶ್ರಮಗಳ ವಠಾರಕ್ಕೆ ತೆರಳಿ ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪತ್ರಿಕಾಗೋಷ್ಠಿ, ರ್ಯಾಲಿಗಳ ಮೂಲಕ ಜಾಗೃತಿ ಮೂಡಿಸುವ ವೈವಿದ್ಯಮ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದರು. ಉಡುಪಿ ಜಿಲ್ಲೆಯಲ್ಲೂ ಮಕ್ಕಳು ಸಕ್ರಿಯವಾಗಿ ಈ ಚಟುವಟಿಕೆಗಳಲ್ಲಿ ಪಾಲ್ಗೊಂಡರು ಮತ್ತು ಜಿಲ್ಲಾದ್ಯಂತ 3,000ಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟಿದ್ದಾರೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಸಿಐಓ ರಾಜ್ಯಘಟಕ ಸದಸ್ಯೆ ಮೆಹರುನ್ನಿಸಾ ಮಣಿಪಾಲ್, ಜಮಾಅತೆ ಇಸ್ಲಾಮೀ ಹಿಂದ್ನ ಉಡುಪಿ ನಗರ ಶಾಖೆಯ ಅಧ್ಯಕ್ಷ ನಿಸಾರ್ ಅಹಮ್ಮದ್, ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್ ಉಪಸ್ಥಿತರಿದ್ದರು. ನೂರ್ಜಹಾನ್ ಕಟಪಾಡಿ ಪ್ರಸ್ತಾವನೆಗೈದರು. ಶಮ್ಶಾದ್ ಹಸನ್ ನಿರೂಪಿಸಿ, ವಂದಿಸಿದರು.