ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಅನೇಕ ಘಟನಾವಳಿ ಗಮನಿಸಿದರೆ, ಇದೊಂದು ಲವ್ ಜಿಹಾದ್ ಪ್ರಕರಣ ಎಂಬುದು ಗೊತ್ತಾಗುತ್ತದೆ. ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗಿ ಪರಿವರ್ತನೆಗೊಂಡಿದ್ದು, ಅವುಗಳ ಮೇಲೆ ನಿಗಾ ಇಡಬೇಕು.

ಹುಬ್ಬಳ್ಳಿ:

ಇಲ್ಲಿನ ವಿಕಾಸನಗರದಲ್ಲಿರುವ ಸಂತ್ರಸ್ತೆಯ ನಿವಾಸಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಶುಕ್ರವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಅನೇಕ ಘಟನಾವಳಿ ಗಮನಿಸಿದರೆ, ಇದೊಂದು ಲವ್ ಜಿಹಾದ್ ಪ್ರಕರಣ ಎಂಬುದು ಗೊತ್ತಾಗುತ್ತದೆ. ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗಿ ಪರಿವರ್ತನೆಗೊಂಡಿದ್ದು, ಅವುಗಳ ಮೇಲೆ ನಿಗಾ ಇಡಬೇಕು. ಕಳೆದ 15-20 ದಿನದ ಅವಧಿಯಲ್ಲಿ ಐದಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನೂ ಕೆಲವರು ಮರ್ಯಾದೆ ಮತ್ತು ಗೌರವಕ್ಕೆ ಹೆದರಿ ಪ್ರಕರಣ ದಾಖಲಿಸಿಲ್ಲ. ಹೀಗಾಗಿ ನಗರದಲ್ಲಿ ಲವ್ ಜಿಹಾದ್‌ನ ವ್ಯವಸ್ಥಿತ ಜಾಲ ಇರುವುದು ಕಂಡು ಬಂದಿದೆ. ಅದನ್ನು ಭೇದಿಸಿ ಜಿಹಾದಿ ಮುಖಗಳನ್ನು ಬಯಲಿಗೆ ತರುವ ಕೆಲಸವನ್ನು ಪೊಲೀಸರು ಮಾಡಬೇಕು. ಇಲ್ಲವಾದಲ್ಲಿ ಎನ್‌ಐಎಗೆ ಪ್ರಕರಣ ಹಸ್ತಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸಂತ್ರಸ್ತೆ ನಿವಾಸಕ್ಕೆ ನುಗ್ಗಿ ದಾಂಧಲೆ ಮಾಡಿದ ಆರೋಪಿ ಸಹೋದರಿ ಬಂಧನ ಇನ್ನೂ ಆಗಿಲ್ಲ. ಹಾಗೆಯೇ ದೊಡ್ಡ ಪ್ರಮಾಣದ ಗಾಯವಾಗದಿದ್ದರೂ, ಆರೋಪಿಯನ್ನು ಆಸ್ಪತ್ರೆಯಲ್ಲಿಯೇ ಇಡಲಾಗಿದೆ. ಇದು ಮೇಲ್ನೋಟಕ್ಕೆ ಆತನಿಗೆ ಜಾಮೀನು ಸಿಗುವವರೆಗೂ ಆಸ್ಪತ್ರೆಯಲ್ಲಿ ಇಡುವ ಯೋಜನೆ ಇದೆ ಎಂಬ ಮಾಹಿತಿ ಇದೆ. ಇದು ಆಗಬಾರದು ಈ ನಿಟ್ಟಿನಲ್ಲಿ ಪೊಲೀಸ್ ಕಮಿಷನರ್ ಸ್ಪಷ್ಟೀಕರಣ ನೀಡಬೇಕು ಮತ್ತು ಕೂಡಲೇ ಆತನನ್ನು ಪೊಲೀಸರು ಕಸ್ಟಡಿಗೆ ಪಡೆದು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣದಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಏನೇ ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಅವರಲ್ಲಿ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಈ ತುಷ್ಟೀಕರಣ ನೀತಿ ಕೈ ಬಿಡಬೇಕು. ಇಲ್ಲದಿದ್ದರೆ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಎಸ್‌ಎಸ್‌ಕೆ ಸಮಾಜದ ಭಾಸ್ಕರ ಜಿತೂರಿ, ವೆಂಕಟೇಶ ಕಾಟವೆ ಸೇರಿದಂತೆ ಇತರರು ಇದ್ದರು.