ತುಂಗಭದ್ರಾ ಜಲಾಶಯದ ನದಿಪಾತ್ರದಲ್ಲಿ ತಗ್ಗಿದ ಪ್ರವಾಹ

| Published : Jul 30 2024, 12:41 AM IST

ಸಾರಾಂಶ

ಸೋಮವಾರದಂದು ತುಂಗಭದ್ರಾ ಜಲಾಶಯದ ನದಿಪಾತ್ರದಲ್ಲಿ ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿದೆ.

ಕನ್ನಡಪ್ರಭ ವಾರ್ತೆ ಮುನಿರಾಬಾದ

ಸೋಮವಾರದಂದು ತುಂಗಭದ್ರಾ ಜಲಾಶಯದ ನದಿಪಾತ್ರದಲ್ಲಿ ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿದೆ. ಕಾರಣ ಸೋಮವಾರ ಸಂಜೆ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವು ಒಂದು ಲಕ್ಷ ಕ್ಯುಸೆಕ್‌ಗೆ ಇಳಿಕೆಯಾಯಿತು. ಜಲಾಶಯದ 33 ಗೇಟುಗಳ ಪೈಕಿ 27 ಗೇಟುಗಳನ್ನು 2.5 ಅಡಿ ಎತ್ತರಕ್ಕೆ ಎತ್ತಿ ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಯಿತು. ಜಲಾಶಯಕ್ಕೆ ಎಷ್ಟು ಒಳಹರಿವು ಅಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿಸಲಾಯಿತು.

ಶನಿವಾರ ಹಾಗೂ ಭಾನುವಾರ ತುಂಗಭದ್ರಾ ಜಲಾಶಯದ ಗೇಟುಗಳಿಂದ ನದಿಗೆ 1.5 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗಿದ್ದು, ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿ ಶ್ರೀ ಹುಲಿಗೆಮ್ಮ ದೇವಸ್ಥಾನದ ಸ್ನಾನದ ಘಟ್ಟ ಮುಳುಗಡೆಯಾಗಿದ್ದು, ಶಿವಪುರ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ, ಹಂಪಿಯ ಪುರಂದರ ದಾಸರ ಮಂಟಪ, ಕಂಪ್ಲಿಯ ಸೇತುವೆ ಪ್ರವಾಹದ ನೀರಿನಲ್ಲಿ ಮುಳುಗಿದ್ದವು.

ಸೋಮವಾರದಂದು ಜಲಾಶಯ ಗೇಟುಗಳ ಮೂಲಕ 1 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗಿದ್ದು, ಪ್ರವಾಹದ ಭೀತಿ ಸ್ವಲ್ಪಮಟ್ಟಿಗೆ ತಗ್ಗಿದ್ದರೂ ಹಂಪಿ ಸ್ಮಾರಕಗಳು ಇನ್ನೂ ಮುಳುಗಡೆಯಾಗಿವೆ.

ರಾಜೀವ್ ಗಾಂಧಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ:

ಬಿಇಡಿ ಪ್ರಥಮ ಸೆಮಿಸ್ಟರಿನ ಪರೀಕ್ಷೆಯ ಫಲಿತಾಂಶದಲ್ಲಿ ಕೊಪ್ಪಳ ನಗರದ ಹೊರ ವಲಯದ ದದೇಗಲ್ ಗ್ರಾಮದಲ್ಲಿರುವ ರಾಜೀವ್‌ಗಾಂಧಿ ರೂರಲ್ ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.ಶರಣವ್ವ ಛತ್ರದ ೫೪೬ (ಶೇ.೯೧.೦೦) ಪ್ರಥಮ ಸ್ಥಾನ, ಗಾಯತ್ರಿ ದೇವಿ ಅಂಡಗಿ ೫೪೩ (ಶೇ.೯೦.೫೦) ದ್ವಿತೀಯ ಸ್ಥಾನ, ಅಶ್ವಿನಿ ತಳವಾರ ೫೩೬ (ಶೇ.೮೯.೩೩) ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ೯೬ ಪ್ರಶಿಕ್ಷಣಾರ್ಥಿಗಳಲ್ಲಿ ೯೫ ಪ್ರಶಿಕ್ಷಣಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜಿನ ಒಟ್ಟು ಫಲಿತಾಂಶ ಶೇ. ೯೮.೯೫ ಆಗಿರುತ್ತದೆ. ಹೆಚ್ಚು ಅಂಕ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಉತ್ತೀರ್ಣರಾದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಕರಿಯಣ್ಣ ಸಂಗಟಿ, ಉಪಾಧ್ಯಕ್ಷೆ ರುದ್ರಮ್ಮ ಸಂಗಟಿ, ಆಡಳಿತಾಧಿಕಾರಿ ಮಹಾಂತೇಶ ಸಂಗಟಿ ಹಾಗೂ ಸಮಸ್ತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ತಿಳಿಸಿದ್ದಾರೆಂದು ಪ್ರಾಚಾರ್ಯ ವಿನೋದ ಹೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.