ಕನ್ನಡಪ್ರಭ ವಾರ್ತೆ, ತುಮಕೂರು

ಎಲ್‌ಪಿಜಿ ಗ್ಯಾಸ್ ಅಭಾವದ ಕಾರಣವೊಡ್ಡಿ ನಗರದಲ್ಲಿ ಒಂದೊಂದು ಬಂಕ್‌ಗಳಲ್ಲಿ ಒಂದೊಂದು ರೀತಿಯಲ್ಲಿ ದುಬಾರಿ ಬೆಲೆಯಲ್ಲಿ ಗ್ಯಾಸ್ ಮಾರಾಟ ಮಾಡುತ್ತಿರುವುದರಿಂದ ಆಟೋ ಚಾಲಕರ ತಮ್ಮ ವ್ಯವಹಾರ ನಿರ್ವಹಣೆ ಕಷ್ಟವಾಗಿದೆ. ಎಲ್ಲಾ ಬಂಕ್‌ಗಳಲ್ಲಿಯೂ ಏಕರೂಪದ ದರ ನಿಗದಿ ಮಾಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್ ಒತ್ತಾಯಿಸಿದರು.

ಗುರುವಾರ ನಗರದಲ್ಲಿ ನಡೆದ ಕರುನಾಡು ವಿಜಯಸೇನೆ ಸಂಘಟನೆ ಸೇರ್ಪಡೆ ಹಾಗೂ ಪದಾಧಿಕಾರಿಗಳ ನೇಮಕದ ಸಭೆಯಲ್ಲಿ ಮಾತನಾಡಿದರು.

ಗ್ಯಾಸ್ ಅಭಾವದಿಂದಾಗಿ ಆಟೋಚಾಲಕರ ವ್ಯವಹಾರ ಕಷ್ಟವಾಗಿ ಅವರು ಜೀವನ ನಿರ್ವಹಣೆ ಮಾಡಲಾಗುತ್ತಿಲ್ಲ. ಪಡೆದ ಸಾಲದ ಕಂತು, ಬಡ್ಡಿ ಕಟ್ಟಲಾಗುತ್ತಿಲ್ಲ. ಸಾಲಗಾರರ ಕಿರುಕುಳ ಹೆಚ್ಚಾಗಿದೆ. ಕೊರೊನಾ ಸಂದರ್ಭದಲ್ಲಿ ತುರ್ತು ಕ್ರಮ ತೆಗೆದುಕೊಂಡಂತೆ ಪ್ರಾಚ್ಯ ದೇಶಗಳ ಯುದ್ಧ ಮುಗಿಯುವವರೆಗೂ ಆಟೋ ಚಾಲಕರ ಮೇಲೆ ಒತ್ತಡ ಹಾಕಿ ಸಾಲ ವಸೂಲಿ ಮಾಡದಂತೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಆಟೋಚಾಲಕ ಬದುಕು ಸಂಕಷ್ಟದಲ್ಲಿದೆ. ಈಗ ಎಲ್‌ಪಿಜಿ ಸಮಸ್ಯೆ ಜೊತೆಗೆ ಹೆಚ್ಚಿನ ಬಡ್ಡಿಗೆ ಸಾಲಪಡೆದು ತೊಂದರೆಪಡುವುದನ್ನು ತಪ್ಪಿಸಲು ಕರುನಾಡ ವಿಜಯಸೇನೆ ಆಟೋಚಾಲಕರ ಕಲ್ಯಾಣನಿಧಿ ಸ್ಥಾಪಿಸುವ ಉದ್ದೇಶ ಹೊಂದಿದೆ. ಇದರಿಂದ ಆಟೋಚಾಲಕರು ಸಣ್ಣ ಪ್ರಮಾಣದಲ್ಲಿ ಸಾಲಸೌಲಭ್ಯ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

ಸಂಘಟನೆಗಳು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ಕೇವಲ ಹೋರಾಟ, ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದಷ್ಟೇ ಸಂಘಟನೆಗಳ ಗುರಿಯಲ್ಲ, ಸಮಾಜಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಕರುನಾಡ ವಿಜಯಸೇನೆಯಿಂದ ಇದೂವರೆಗೆ 130 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿದೆ. 500 ಶಾಲೆಗಳಿಗೆ ಬಣ್ಣ ಹೊಡೆದು, ಅಗತ್ಯ ಸೌಕರ್ಯಗಳನ್ನು ಒದಗಿಸಿ ಶಾಲೆಗಳ ಪುನಶ್ಚೇತನ ಮಾಡುವ ಕಾರ್ಯಕ್ರಮ ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಆರೋಗ್ಯ ಶಿಬಿರ, ಉದ್ಯೋಗಮೇಳ ಮೊದಲಾದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ವಿಜಯಸೇನೆ ತೊಡಗಿಕೊಂಡಿದೆ ಎಂದರು.


ಈ ವೇಳೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷರಾಗಿ ಕೆ.ಗಂಗಾಧರ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ, ರಾಜ್ಯ ಕಾರ್ಯದರ್ಶಿ ರಂಜನ್, ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ರಾಧಾ ಗಂಗಾಧರ್, ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ಆಟೋ ಘಟಕ ಜಿಲ್ಲಾಧ್ಯಕ್ಷ ತಿಪ್ಪೇಶ್, ನಗರ ಅಧ್ಯಕ್ಷ ರಾಕೇಶ್, ಎಸ್ಸಿ-ಎಸ್ಟಿ ಘಟಕ ಅಧ್ಯಕ್ಷ ನಾಗರಾಜು, ಮುಖಂಡರಾದ ಹರೀಶ್, ಕಾವ್ಯ, ರುದ್ರೇಶ್ ಮೊದಲಾದವರು ಭಾಗವಹಿಸಿದ್ದರು.