ಸಾರಾಂಶ
ಕನ್ನೆಡಪ್ರಭ ವಾರ್ತೆ ಜಮಖಂಡಿ
ಪಂಚ ಜ್ಞಾನೇಂದ್ರಿಯಗಳಲ್ಲಿ ದೃಷ್ಟಿ ಅತ್ಯಂತ ಪ್ರಮುಖ ಅಂಗ. ಈ ಸೂಕ್ಷ್ಮ ಅಂಗದ ತೊಂದರೆ, ದೃಷ್ಟಿ ಮಾಂದ್ಯತೆ ಕಾರಣಗಳಿಗೆ ಈಗ ನವೀನ ತಂತ್ರಜ್ಞಾನಗಳಿಂದ ಹಾಗೂ ಹೊಸ ಆವಿಷ್ಕಾರಗಳಿಂದ ಚಿಕಿತ್ಸೆ ಸಾಧ್ಯವಿದ್ದು, ನೇತ್ರಗಳಿಗೆ ಹೊಸ ಆಶಾದೀಪವಾಗಿ ಹೊಮ್ಮುತ್ತಿದೆ. ನೂತನ ತಂತ್ರಜ್ಞಾನ ಮೈಗೂಡಿಸಿಕೊಳ್ಳುತ್ತಾ ಚಿಕಿತ್ಸಾ ವಿಧಾನದಲ್ಲಿ ಮಾನವೀಯತೆ ಅಂಶವನ್ನು ಕೈ ಬಿಡದೆ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮುನ್ನಡೆದಿದೆ ಎಂದು ಡಾ.ದೀಪಾ.ಎಸ್. ಮುಗಳಿ ತಿಳಿಸಿದರು.ನಗರದ ಎಂ.ಎಂ. ಜೋಷಿ ನೇತ್ರ ವಿಜ್ಞಾನ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನತೆಗೆ ನಾಲ್ಕು ದಶಕಗಳಿಂದ ನೇತ್ರ ಚಿಕಿತ್ಸಾ ರಂಗದಲ್ಲಿ ಗುಣಮಟ್ಟದ ಸೇವೆ ಸಲ್ಲಿಸುತ್ತಿದೆ. ನವೀನ ಯಂತ್ರೋಪಕರಣಗಳಿಂದ ಸುಸಜ್ಜಿತ ಹಾಗೂ ನಿಪುಣ ಸಿಬ್ಬಂದಿ ಹೊಂದಿರುವ ಆಸ್ಪತ್ರೆ, ನೇತ್ರ ಚಿಕಿತ್ಸೆಯ ಹೊಸ ಆವಿಷ್ಕಾರ ಹಾಗೂ ತಂತ್ರಜ್ಞಾನ ನಿರಂತರವಾಗಿ ಅಳವಡಿಸಿಕೊಳ್ಳುತ್ತ ವೃತ್ತಿಪರತೆ ಹಾಗೂ ಮಾನವೀಯ ದೃಷ್ಟಿಕೋನದ ಚಿಕಿತ್ಸೆ ನೀತ್ತ್ತಿದೆ. ಲೆಸ್ ಕ್ಲಾಸಿಕ್ ಲೇಸರ್ ಚಿಕಿತ್ಸೆ, ಕನ್ನಡಕ ಇಲ್ಲದೆ ಉತ್ತಮ ದೃಷ್ಟಿ ,ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯಲ್ಲಿ ಅತ್ಯಂತ ನವೀನ ವಿಧಾನವಾದ ಕೋಲ್ಡ್ ಫೇಕೋ ವಿಧಾನ(ಹೊಲಿಗೆ ಹಾಕದೆ ಪೊರೆಯ ಆಪರೇಷನ್) , ಅಕ್ಷಿಪಟಲದ ಶಸ್ತ್ರ ಚಿಕಿತ್ಸೆ, ಮೆಲ್ಲಗಣ್ಣಿನ ಶಸ್ತ್ರಚಿಕಿತ್ಸೆ, ಕಾಚಬಿಂದು ಶಸ್ತ್ರಚಿಕಿತ್ಸೆ, ಕಾರ್ನಿಯಾದ ಕಸಿ ಶಸ್ತ್ರಚಿಕಿತ್ಸೆ,ಲೇಸರ್ ಕಿರಣದ ಸಹಾಯದಿಂದ ಅಕ್ಷಿಪಟಲದ ಹಲವಾರು ತೊಂದರೆಗಳಿಗೆ ಚಿಕಿತ್ಸೆ, ಸಕ್ಕರೆ ಕಾಯಿಲೆಯಿಂದ ಉಂಟಾಗುವ ಡಯಾಬಿಟಿಕ್ ರೆಟಿನೋಪಥಿಗೆ ಪಾಸ್ಕಲ್ ಹಾಗೂ ಡಯೋಡ್ ಲೇಸರ್ ಚಿಕಿತ್ಸೆ, ಕಂಟ್ರಾಕ್ಟ್ ಲೆನ್ಸ್ ಕ್ಲಿನಿಕ್ ಹೀಗೆ ವಿವಿಧ ರೀತಿಯ ಆಧುನಿಕ ತಂತ್ರಜ್ಞಾನಗಳುಳ್ಳ ಮಷೀನ್ ಗಳು ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯವಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಯ ಜನರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದೇವೆ. ಕೆಎಸ್ಆರ್ಟಿಸಿ, ಪೊಲೀಸ್ ಸ್ಟೇಷನ್, ನಿವೃತ್ತ ಸರ್ಕಾರಿ ನೌಕರರ ಸಂಘ, ಹೀಗೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಂಡು ಸಾರ್ವಜನಿಕರ ಸೇವೆಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ನೇತ್ರದಾನ ಜಾಗೃತಿ ಶಿಬಿರಗಳನ್ನು ಕೂಡ ಹಮ್ಮಿಕೊಂಡು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕಣ್ಣಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಕಣ್ಣಿನ ಆರೋಗ್ಯವಾಗಿಟ್ಟುಕೊಳ್ಳಲು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಊಟದಲ್ಲಿ ಎಣ್ಣೆ ಪದಾರ್ಥ ಕಡಿಮೆ ಮಾಡಬೇಕು.ಕೆಂಪು, ಹಳದಿ, ಹಸಿರು ಬಣ್ಣದ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಮಕ್ಕಳಿಗೆ ಕಣ್ಣಿನ ಸಮಸ್ಯೆಹೆಚ್ಚುತ್ತಿದ್ದು ಮಕ್ಕಳ ಕೈಗೆ ಮೊಬೈಲ್ ಕೊಡುಬಾರದು ಎಂದು ತಿಳಿಸಿದರು.