ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಗಂಗಾ ಪರಮೇಶ್ವರಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಕ್ಷೇತರ ಮೈತ್ರಿಕೂಟದ ಬೆಂಬಲಿತ ಎಂ.ರಘುಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ್ ಆಯ್ಕೆಯಾದರು.11 ನಿರ್ದೇಶಕರ ಸಹಕಾರ ಸಂಘಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ವರು, ಐವರು ಪಕ್ಷೇತರು ಹಾಗೂ ಜೆಡಿಎಸ್-ಬಿಜೆಪಿಯ ತಲಾ ಒಬ್ಬರು ಆಯ್ಕೆಯಾಗಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಐವರು ಪಕ್ಷೇತರು ಹಾಗೂ ಜೆಡಿಎಸ್-ಬಿಜೆಪಿಯ ತಲಾ ಒಬ್ಬರು ಮೈತ್ರಿಕೂಟ ರಚನೆ ಮಾಡಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಘದ ಸಭಾಂಗಣದಲ್ಲಿ ಬುಧವಾರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಮೈತ್ರಿಕೂಟದ ಅಭ್ಯರ್ಥಿ ಎಂ.ರಘು ಕುಮಾರ್ ಹಾಗೂ ಕಾಂಗ್ರೆಸ್ ನ ಶ್ವೇತ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಮಾತ್ರ ಉಮೇದುವಾರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಚುನಾವಣೆಗೆ ಶ್ವೇತ ಗೈರಾದ ಹಿನ್ನೆಲೆಯಲ್ಲಿ ಎಂ.ರಘುಕುಮಾರ್ 7 ಮತ ಪಡೆದು ಪಡೆದು ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸುಧಾಕರ್ ಘೋಷಿಸಿದರು.ನೂತನ ಅಧ್ಯಕ್ಷ ಎಂ.ರಘು ಕುಮಾರ್ ಮಾತನಾಡಿ, ನಮಗೆ ಕೊಟ್ಟಮಾತಿನಂತೆ ಎಲ್ಲರೂ ಬೆಂಬಲ ನೀಡಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಸ್ನೇಹಿತರು, ಮುಖಂಡರ ಸಹಕಾರ ಅಪಾರವಾಗಿದೆ. ಎಲ್ಲ ನಿರ್ದೇಶಕರ ಹಾಗೂ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಾಗುವುದು. ಅಲ್ಲದೇ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿ ಬಿಜೆಪಿ-ಜೆಡಿಎಸ್ ಪಕ್ಷದವರಿಗೂ ಅಭಾರಿಯಾಗಿರುತ್ತೇವೆ ಎಂದು ಹೇಳಿದರು.
ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಗಂಗಾ ಪರಮೇಶ್ವರಿ ಸಹಕಾರ ಸಂಘದ ಎಲ್ಲ ನಿರ್ದೇಶಕರು ಹಾಗೂ ಸದಸ್ಯರ ವಿಶ್ವಾಸದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ನಿರ್ದೇಶಕ ಜೆಡಿಎಸ್ ನ ಕಂಬರಾಜು ಮಾತನಾಡಿ, ಪಕ್ಷೇತರರಿಗೆ ಬಿಜೆಪಿ, ಜೆಡಿಎಸ್ ಬೆಂಬಲಿಸಿದ್ದು, ಎಲ್ಲರ ಮಾರ್ಗದರ್ಶನದಲ್ಲಿ ಸಂಘದ ಪ್ರಗತಿಗೆ ಮುಂದಾಗುತ್ತೇವೆ. ಆಯ್ಕೆಗೆ ಸಹಕರಿಸಿದ ಎರಡೂ ಪಕ್ಷದ ಮುಖಂಡರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ಪುರಸಭೆ ಸದಸ್ಯ ನಾಗೇಶ್, ನಿರ್ದೇಶಕರಾದ ಕಂಬರಾಜು, ಎಂ.ಆರ್.ಪ್ರಸಾದ್, ಮೊಗಣ್ಣ, ಗುರುಸಿದ್ದಯ್ಯ, ಪೂರ್ಣೀಮಾ, ಮುಖಂಡರಾದ ನಾರಾಯಣ, ಆಟೋ ಮಂಜಣ್ಣ, ದೇವರಾಜು, ವೇಣು, ಪ್ರಭು, ಮಾದೇಶ್, ಸ್ವಾಮಿ, ಚಂದ್ರು, ರಾಜಣ್ಣ, ಪ್ರಕಾಶ್ ಪಾಲ್ಗೊಂಡಿದ್ದರು.