ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯುತ್ ಕ್ಷೇತ್ರ ಖಾಸಗೀಕರಣ ನೀತಿ ವಿರೋಧಿಸಿ ಚೆಸ್ಕಾಂ ಅಧಿಕಾರಿಗಳು ಮತ್ತು ನೌಕರರು ಪಟ್ಟಣದ ವಿಭಾಗದ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.ನಿಗಮದ ನೌಕರರ ಒಕ್ಕೂಟದಿಂದ ನಡೆದ ಅಧಿಕಾರಿಗಳು, ನೌಕರರು, ನಿವೃತ್ತ ನೌಕರರು ಸುಮಾರು ಒಂದು ಗಂಟೆಗೆ ಕಾಲ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನೌಕರರು ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಚಟುವಟಿಕೆ ಪ್ರಾರಂಭಿಸಲು ಲೈಸನ್ಸ್ ಕೋರಿ ರಾಜ್ಯದ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿದರು. ಟಾಟಾ ಪವರ್ ಸಂಸ್ಥೆ ವಿದ್ಯುತ್ ಪರವಾನಿಗೆ ಪಡೆಯಲು ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.ಖಾಸಗೀಕರಣದಿಂದ ವಿದ್ಯುತ್ ದರ ಏರಿಕೆ, ಗೃಹ ಜ್ಯೋತಿ ಯೋಜನೆ, ಕೃಷಿ ಪಂಪ್ ಸೆಟ್ ಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಸಹಾಯಧನ ಯೋಜನೆಗೆ ದಕ್ಕೆ ಉಂಟಾಗುತ್ತದೆ. ಖಾಸಗಿ ಕಂಪನಿಗಳು ವಿದ್ಯುತ್ ದರವನ್ನು ತಮ್ಮ ಮನ ಬಂದಂತೆ ನಿಗದಿಪಡಿಸಲು ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯುತ್ ಖಾಸಗೀಕರಣ ವಿರೋಧಿಸಿ ಆಕ್ಷೇಪಣೆ ಸಲ್ಲಿಸಲು ಜೂ.23ರಂದು ಕೊನೆ ದಿನ. ಪ್ರತಿ ಗ್ರಾಹಕರು ಮೊಬೈಲ್ ಫೋನ್ ಮತ್ತು ಅರ್ಜಿ ಮೂಲಕ ಆಕ್ಷೇಪಣೆಸಲ್ಲಿಸುವಂತೆ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಮುಖಂಡರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಚೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಎನ್.ಶಿವಕುಮಾರ್, ಲೆಕ್ಕಾಧಿಕಾರಿ ಡಿ.ಸುನಿತಾ, ಎಇಇ ಗಳಾದ ಆರ್.ಪ್ರದೀಪ್ ಕುಮಾರ್, ಎಚ್.ಈ.ಮಹದೇವು, ಜಿ.ಮೋಹನ್, ನೌಕರರ ಸಂಘದಕೇಂದ್ರ ಸಮಿತಿ ಸದಸ್ಯ ಮಹದೇವ, ಮದ್ದೂರು ವಿಭಾಗದ ಅಧ್ಯಕ್ಷ ಸುರೇಶ, ಕಾರ್ಯದರ್ಶಿ ಸಿ.ಎಸ್.ಶ್ರೀಧರ, ವಿಭಾಗ ವ್ಯಾಪ್ತಿಯ ಅಧಿಕಾರಿಗಳು, ನೌಕರರು, ಗುತ್ತಿಗೆದಾರರು ಭಾಗವಹಿಸಿದ್ದರು.