ಸಾರಾಂಶ
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಸೋಮವಾರ ನಡೆದ ಸಾಮರಸ್ಯ ದಿನಾಚರಣೆ ಹಾಗೂ ಬೇಸಗೆ ಶಿಬಿರದ ಸಮಾರೋಪ ಸಮಾರಂಭ ನೆರವೇರಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಅಸ್ಪೃಶ್ಯತೆ ಎಂಬ ಮಹಾ ಪಾಪ ಕೃತ್ಯವನ್ನು ವಿರೋಧಿಸಿ ಭರತ ಭೂಮಿಯನ್ನು ಸಮಾನತೆಯ ಸಾಮರಸ್ಯದ ನೆಲೆವೀಡಾಗಿಸಲು ಯತ್ನಿಸಿದ ಸಂವಿಧಾನ ಶಿಲ್ಪಿ ಡಾ . ಬಿ ಆರ್ ಅಂಬೇಡ್ಕರ್ ಅವರ ಜೀವನಾದರ್ಶವನ್ನು ಪ್ರತಿಯೋರ್ವ ಭಾರತೀಯ ಪಾಲಿಸಬೇಕಾಗಿದೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಹರಿರಾಮಚಂದ್ರ ಪ್ರತಿಪಾದಿಸಿದರು.ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಸೋಮವಾರ ನಡೆದ ಸಾಮರಸ್ಯ ದಿನಾಚರಣೆ ಹಾಗೂ ಬೇಸಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾಧವ ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ ಮಾತನಾಡಿ, ಪ್ರತಿ ಕಣದಲ್ಲೂ ದೇವರನ್ನು ಕಾಣುವ ನಾವು ಆತ್ಮಧಾರಿಗಳಾದ ಎಲ್ಲರನ್ನೂ ಸಮಾನವಾಗಿ ಕಂಡು ಸಾಮರಸ್ಯದಿಂದ ಬಾಳಬೇಕು ಎಂದು ಕರೆ ನೀಡಿದರು.ಪೋಷಕ ಸಂಘದ ಸದಸ್ಯೆ ಅಶ್ವಿತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಶಿಬಿರಾರ್ಥಿಗಳಾದ ಶ್ರೀದೇವಿ ಹಾಗೂ ಆಕಾಶ್ ನಾಯಕ್ ಶಿಬಿರದ ಕುರಿತಾಗಿ ತಮ್ಮ ಅನುಭವಗಳ ಕುರಿತು ಅನಿಸಿಕೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಶು ಮಂದಿರದ ಮಾತಾಜಿಗಳಾದ ಚೈತ್ರ , ಕಾಂತಿಮಣಿ, ಚಂದ್ರಾವತಿ ಇದ್ದರು.
ಬಾಲಗೋಕುಲದ ಸಾನಿಕಾ ನಿರೂಪಿಸಿದರು. ಮೋಕ್ಷ ಸ್ವಾಗತಿಸಿದರು. ಶ್ರವಣ್ ವಂದಿಸಿದರು. ತನ್ಮಯಿ ಪ್ರಾರ್ಥಿಸಿದರು.