ತಾಲೂಕು ಅಭಿವೃದ್ದಿಗೆ ಮಧು ಕೊಡುಗೆ ಶೂನ್ಯ

| Published : Jun 12 2024, 12:34 AM IST

ಸಾರಾಂಶ

ಶಿಕಾರಿಪುರದ ಕುಮದ್ವತಿ ಆಡಿಟೋರಿಯಂನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಸಂಸದ ರಾಘವೇಂದ್ರ, ವಿಪ ಸದಸ್ಯ ಡಾ.ಧನಂಜಯ ಸರ್ಜಿರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ಅಭಿವೃದ್ದಿಗೆ ಉಸ್ತುವಾರಿ ಸಚಿವ ಮಧು ಅವರ ಕೊಡುಗೆ ಶೂನ್ಯ. ಇಲ್ಲಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ಶಾಸಕರಾಗಿ ವಿಧಾನಸಭೆಯಲ್ಲಿ ಪ್ರಥಮ ದ್ವೇಷ ಬಾಷಣದ ಮೂಲಕ ವಾಪಾಸ್ ಕಳುಹಿಸಿದ ಬಗ್ಗೆ ಕ್ಷೇತ್ರದ ಮತದಾರರಿಗೆ ಬೇಸರವಾಗಿಲ್ಲ. ಈ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡದ ಬಗ್ಗೆ ಸಂಸದ ಬಿ.ವೈ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಪಟ್ಟಣದ ಕುಮದ್ವತಿ ಆಡಿಟೋರಿಯಂನಲ್ಲಿ ಲೋಕಸಭೆ ಹಾಗೂ ವಿ.ಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ನಾಯಕರು ಮತದಾರರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಪ್ರತಿನಿಧಿಗಳು ಅಧಿಕಾರ ವಂಚಿತರಾಗಿ ಮಾಜಿ ಆಗಬಹುದು. ಆದರೆ ಕಾರ್ಯಕರ್ತ ಎಂದಿಗೂ ಮಾಜಿ ಆಗಲಾರ ಎಂದು ಶ್ಲಾಘಿಸಿದರು. ಕಾರ್ಯಕರ್ತರನ್ನು ಗೌರವಿಸುವ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದ್ದು ಕಾರ್ಯಕರ್ತರ ಶ್ರಮದಿಂದ ಜನಪ್ರತಿನಿಧಿಯಾಗಿ ವೇದಿಕೆಯಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಯಡಿಯೂರಪ್ಪನವರ ರಾಜಕೀಯ ಹೋರಾಟದ ಆರಂಭದ ಮೂಲಕ 1983 ರಿಂದ ಇದುವರೆಗೂ 11 ವಿಧಾನಸಭಾ ಚುನಾವಣೆ ಹಾಗೂ 6 ಲೋಕಸಭಾ ಚುನಾವಣೆಯನ್ನು ಎದುರಿಸಿದ್ದು ಯಡಿಯೂರಪ್ಪನವರ ಸಹಿತ ನನ್ನ ಹಾಗೂ ಸಹೋದರನ ಗೆಲುವಿಗೆ ಕಾರ್ಯಕರ್ತರು ಜೀವಪಣಕ್ಕಿಟ್ಟು ಶ್ರಮಿಸಿದ್ದಾರೆ. ಕಾರ್ಯಕರ್ತರ ಶ್ರಮ ಹಾರೈಕೆಯಿಂದ ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಪಡೆದಿರುವುದಾಗಿ ತಿಳಿಸಿದ ಅವರು, ಬಿಜೆಪಿ ಕಾರ್ಯಕರ್ತರನ್ನು ಚೇಲಾ ಎಂದ ಉಸ್ತುವಾರಿ ಸಚಿವ ಮಧು ಅವರ ಹೇಳಿಕೆ ಹೆಚ್ಚು ಆಕ್ರೋಶಭರಿತವಾಗಿದ್ದು ಇದರೊಂದಿಗೆ ಶಿಕಾರಿಪುರಕ್ಕೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ಶಾಸಕನಾಗಿ ವಿಧಾನಸಭೆಯಲ್ಲಿ ಪ್ರಥಮ ಬಾಷಣದಲ್ಲಿ ದ್ವೇಷ ಕಾರಿ ವಾಪಾಸ್ ಕಳುಹಿಸಿದವರಿಗೆ ಹೆಚ್ಚು ಮತ ದೊರಕಿದೆ. ಸೊರಬ ತಾಲೂಕಿಗೆ ನೀರಾವರಿ ಯೋಜನೆ ಯಡಿಯೂರಪ್ಪ ಅನುಷ್ಠಾನಗೊಳಿಸಿದ್ದು ಶಿಕಾರಿಪುರಕ್ಕೆ ಅವರಿಂದ ಸಾಧ್ಯವಾ ? ಈ ಎಲ್ಲ ಪ್ರಶ್ನೆಗೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡದ ಬಗ್ಗೆ ಬೇಸರವಾಗಿದೆ ಎಂದು ತಿಳಿಸಿದರು.

ಬೇರೆ ತಾಲೂಕಿನಲ್ಲಿ ಕಳೆದ ಬಾರಿಗಿಂತ 2-3 ಪಟ್ಟು ಹೆಚ್ಚು ದಾಖಲೆ ಮತ ದೊರಕಿದ್ದು ಶಿಕಾರಿಪುರದಲ್ಲಿನ ಮತ ಅಂತರ ಕಡಿಮೆಯಾಗಿ ಕಡೆ ಸ್ಥಾನದಲ್ಲಿರುವುದು ಬೇಸರ ತಂದಿದೆ ಎಂದರು. ಕಳೆದ 5-6 ವರ್ಷದಿಂದ ನಿಷ್ಕ್ರಿಯವಾಗಿರುವ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಬೀಗಹಾಕಲು ಬಿಡುವುದಿಲ್ಲ. ಪುನಶ್ಚೇತನಕ್ಕೆ ಕೇಂದ್ರ ಸಚಿವ ಎಚ್ಡಿಕೆ ಬೇಟಿ ಮಾಡಿ ಮನವಿ ಮಾಡುವುದಾಗಿ ತಿಳಿಸಿ ರೈಲ್ವೆ ಸಹಿತ ಎಲ್ಲ ಅಭಿವೃದ್ದಿ ಕಾರ್ಯ ಸರಾಗವಾಗಿ ನಡೆಯಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಸಣ್ಣ ಪುಟ್ಟ ವ್ಯತ್ಯಾಸದ ಮಧ್ಯೆ ಈ ತಾಲೂಕು ಯಡಿಯೂರಪ್ಪ, ರಾಘಣ್ಣ, ವಿಜಯಣ್ಣ ಜತೆಗೆ ಬಿಜೆಪಿಗೆ ಭದ್ರ ಬುನಾದಿ ಕಲ್ಪಿಸಿಕೊಟ್ಟಿದೆ. ಕಾಂಗ್ರೆಸ್ ಪುಡಾರಿಗಳ ಬಗ್ಗೆ ತಲೆಕೆಡಿಸಿಕೊಳ್ಳದಂತೆ ತಿಳಿಸಿ ಸಂಘಟನೆಯನ್ನು ಸದೃಡಗೊಳಿಸಲು ಯುವ ಮೋರ್ಚಾ, ಮಹಿಳಾ ಮೋರ್ಚಾ ಸಹಿತ ಎಲ್ಲ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬಬೇಕಾಗಿದ. ಬರಲಿರುವ ಜಿ.ಪಂ, ತಾ.ಪಂ ಚುನಾವಣೆಯನ್ನು ಹೆಚ್ಚಿನ ಒಗ್ಗಟ್ಟು, ಆತ್ಮಸ್ಥೈರ್ಯದಿಂದ ಎದುರಿಸೋಣ ಎಂದರು.

ಈ ವೇಳೆ ನೂತನ ಸಂಸದ ರಾಘವೇಂದ್ರ, ವಿ.ಪ ಸದಸ್ಯ ಡಾ.ಧನಂಜಯ ಸರ್ಜಿ ಹಾಗೂ ಹೆಚ್ಚು ಮತ ನೀಡಿದ ವಿವಿಧ ಶಕ್ತಿ ಕೇಂದ್ರದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮೇಘರಾಜ್, ತಾ.ಅಧ್ಯಕ್ಷ ಹನುಮಂತಪ್ಪ ಮುಖಂಡ ಗುರುಮೂರ್ತಿ, ಕೊಳಗಿ ರೇವಣಪ್ಪ, ಎಚ್.ಟಿ ಬಳಿಗಾರ್, ಹಾಲಪ್ಪ, ವಸಂತಗೌಡ, ಅಗಡಿ ಅಶೋಕ್, ಸಿದ್ರಾಮಪ್ಪ, ಗಾಯತ್ರಿದೇವಿ, ನಿವೇದಿತಾ ರಾಜು, ರೇಖಾ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಗೌಡ ಮತ್ತಿತರರು ಉಪಸ್ಥಿತರಿದ್ದರು.