ಮಧ್ಯ ಸರ್ಕಲ್‌: ಡಾಂಬರೀಕರಣಕ್ಕೆ ಚಾಲನೆ

| Published : May 25 2025, 01:19 AM IST / Updated: May 25 2025, 01:20 AM IST

ಸಾರಾಂಶ

ಸುರತ್ಕಲ್‌ ಸಮೀಪದ ಮಧ್ಯ ಸರ್ಕಲ್‌ನಿಂದ ಮಧ್ಯ ಗುರುನಗರ 9ನೇ ವಿಭಾಗದ ಐಟಿಐ ತನಕದ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಶಾಸಕರ ಮುಖಾಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 1 ಕೋಟಿ ರು. ಮೊತ್ತದ ಅನುದಾನದ ಕಾಮಗಾರಿಯನ್ನು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯದಿಂದಾಗಿ ಅನುದಾನವಿಲ್ಲದೆ ಎರಡು ವರ್ಷಗಳಲ್ಲಿ ಶಾಸಕರಿಗೆ ಕೇವಲ 18 ಕೋಟಿಯಷ್ಟು ಅನುದಾನ ಕೊಡುವ ಮೂಲಕ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿದೆ. ಗ್ರಾಮಾಂತರ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಸುರತ್ಕಲ್‌ ಸಮೀಪದ ಮಧ್ಯ ಸರ್ಕಲ್‌ನಿಂದ ಮಧ್ಯ ಗುರುನಗರ 9ನೇ ವಿಭಾಗದ ಐಟಿಐ ತನಕದ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಶಾಸಕರ ಮುಖಾಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 1 ಕೋಟಿ ರು. ಮೊತ್ತದ ಅನುದಾನದ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ವರ್ಷದಲ್ಲಿ ಸುಮಾರು 2000 ಕೋಟಿ ರು. ಅನುದಾನ ತಂದು ಹೆಚ್ಚಿನ ರಸ್ತೆಗಳ ಅಭಿವೃದ್ಧಿ ಕೆಲಸ ಆಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಸ್ಥಳೀಯ ಪ್ರಮುಖರು ಗಮನಕ್ಕೆ ತಂದ ನಂತರ ಅಗತ್ಯ ಅನುದಾನವನ್ನು ಹೊಂದಿಕೊಂಡು ಕಾಮಗಾರಿ ಮುಗಿಸಲಾಗಿದೆ ಎಂದು ತಿಳಿಸಿದರು.

ಚೇಳೈರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾತನಾಡಿ, ಶಾಸಕರು ಚೇಳೈರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 30 ಕೋಟಿಗಳಷ್ಟು ಅನುದಾನ ಇರಿಸಿ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆಂದು ಹೇಳಿದರು.

ಚೇಳೈರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ, ಸದಸ್ಯರಾದ ಯಶೋದಾ ಬಿ., ಬಾಲಕೃಷ್ಣ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ವಜ್ರಾಕ್ಷಿ ಪಿ. ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ವಸಂತ್, ಪ್ರಮುಖರಾದ ಪ್ರಭಾಕರ ಶೆಟ್ಟಿ, ವಿನೋದ್ ಆಳ್ವ ಮಧ್ಯ, ಸತೀಶ್ ಕೋಟ್ಯಾನ್ ಮಧ್ಯ, ಶಾಫಿ ಮಧ್ಯ, ಗುತ್ತಿಗೆದಾರ ಎಂ.ಜಿ.ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.