ಮಾದಿಗ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಶ್ರೀ ಶಿವಯೋಗಿ ಮಂದಿರದ ನೂತನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಮೇ.22ರ ಬದಲಿಗೆ ಮೇ.25ಕ್ಕೆ ಮುಂದೂಡಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ, ಮಾದಿಗ ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಿಗ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಶ್ರೀ ಶಿವಯೋಗಿ ಮಂದಿರದ ನೂತನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಮೇ.22ರ ಬದಲಿಗೆ ಮೇ.25ಕ್ಕೆ ಮುಂದೂಡಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ, ಮಾದಿಗ ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025-26ನೇ ಸಾಲಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸುಮಾರು 500 ಜನ ಮಾದಿಗ ಸಮುದಾಯದ ಮಕ್ಕಳಿಗೆ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಬೆಳಿಗ್ಗೆ 9ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಅಲ್ಲಿಂದ ಶ್ರೀ ಜಯದೇವ ವೃತ್ತದ ಮಾರ್ಗವಾಗಿ ಶ್ರೀ ಶಿವಯೋಗಿ ಮಂದಿರದ ಸಮಾರಂಭ ಸ್ಥಳಕ್ಕೆ ವಿದ್ಯಾರ್ಥಿಗಳು, ಸಮಾಜದ ಮುಖಂಡರು, ಮಹಾಸಭಾ ಪದಾಧಿಕಾರಿಗಳು, ಯುವ ಜನರು ಭಾಗಹಿಸುವರು. ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಒಳಮೀಸಲಾತಿ ಜಾರಿಗೊಳಿಸಿದ ಸಚಿವರು, ಶಾಸಕರಿಗೂ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮಾದಿಗ ಮಹಾಸಭಾ ಕಳೆದ 20 ವರ್ಷದಿಂದ ಮಾದಿಗ ಸಮುದಾಯದ ಏಳಿಗೆಗಾಗಿ ಹೋರಾಟ ಮಾಡುತ್ತಾ ಬಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಕರೆ ನೀಡಿರುವಂತೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿಸಬೇಕಾಗಿದೆ ಎಂದರು.

ಮಾದಿಗ ಪೀಠಕ್ಕೆ ಕೊಂಡಜ್ಜಿಯಲ್ಲಿ 20 ಎಕರೆ ನೀಡಿ

ಮಾದಿಗ ಜನ ಸಂಸ್ಕೃತಿ ಉತ್ಸವ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಕೊಂಡಜ್ಜಿ ಪ್ರದೇಶದಲ್ಲಿ 20 ಎರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದೇವೆ. ಆದಷ್ಟು ಬೇಗನೆ ಮಾದಿಗ ಸಮುದಾಯದ ಪೀಠ ಸ್ಥಾಪನೆಗೆ ಅಗತ್ಯವಾದ 20 ಎಕರೆ ಜಾಗವನ್ನು ಕೊಂಡಜ್ಜಿ ಪ್ರದೇಶದಲ್ಲೇ ನೀಡಬೇಕು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ತೆಗೆ 85 ಎಕರೆ ಜಾಗ ನೀಡಿದ್ದಾಗಿ ಜಿಲ್ಲಾಡಳಿತ ಹೇಳುತ್ತದೆ. ಕೊಂಡಜ್ಜಿಯ 85 ಎಕರೆ ಜಾಗದಲ್ಲಿ ನಿತ್ಯವೂ ಡ್ರಿಲ್ ಇತರೆ ಚಟುವಟಿಕೆ ಇರುವುದಿಲ್ಲ. ಮಾದಿಗ ಸಮುದಾಯದ ಶಾಖಾ ಮಠಕ್ಕೆ 25 ಎಕರೆ ಜಾಗ ನೀಡುವಂತೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ರಿಗೆ ಮನವಿ ಮಾಡಲಿದ್ದೇವೆ. ಒಂದು ವೇಳೆ ಜಾಗ ನೀಡದಿದ್ದರೆ ಮಾದಿಗ ಮಹಾಸಭಾದಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾದಿಗ ಸಮುದಾಯಕ್ಕೆ ಜಿಲ್ಲಾ ಕೇಂದ್ರದಲ್ಲಿ ಕಲ್ಯಾಣ ಮಂಟಪದ ಅವಶ್ಯಕತೆ ಇದೆ. ಈ ಬಗ್ಗೆಯೂ ಜಾಗ ನೀಡುವಂತೆ ಮನವಿ ಮಾಡಿದ್ದೇವೆ. ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಜಾತಿ, ಸಮುದಾಯಗಳಿಗೂ ಕಲ್ಯಾಣ ಮಂಟಪ, ಸಮುದಾಯ ಭವನಕ್ಕೆ ಜಾಗ ನೀಡಲಾಗಿದೆ. ಆದರೆ, 70 ವರ್ಷದಿಂದ ಮಾದಿಗ ಸಮುದಾಯಕ್ಕೆ ಕಲ್ಯಾಣ ಮಂಟಪ, ಸಮುದಾಯ ಭವನಕ್ಕೆ ಜಾಗ ನೀಡಿಲ್ಲ. ಮಾದಿಗರು ಮಾಡಿದ ತಪ್ಪಾದರೂ ಏನೆಂಬುದೇ ಅರ್ಥವಾಗುತ್ತಿಲ್ಲ. ಕಾಂಗ್ರೆಸ್, ಬಿಜೆಪಿ ಹೀಗೆ ಯಾವುದೇ ಸರ್ಕಾರದಿಂದಲೂ ಮಾದಿಗ ಸಮುದಾಯಕ್ಕೆ ಜಾಗ ನೀಡಿಲ್ಲ. ಆಯಾ ಪಕ್ಷಗಳ ಸಿಎಂಗಳನ್ನು ಭೇಟಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ದಾವಣಗೆರೆ ಪಿಜೆ ಬಡಾವಣೆಯ ಮಹಾತ್ಮ ಗಾಂಧಿ ವಿದ್ಯಾಸಂಸ್ಥೆಗೆ ಕೋವಿಡ್ ಸಂದರ್ಭದಲ್ಲಿ 2005-06ರಿಂದ 2007-08ರವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆ ಸಂಸ್ಥೆಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡಬೇಕು. ಗಾಂಧಿ ನಗರದ ಪಾರ್ಕ್ ಅಭಿವೃದ್ಧಿಪಡಿಸಬೇಕು ಎಂದರು.

ಮಹಾಸಭಾದ ಗೌರವಾಧ್ಯಕ್ಷ, ನಿವೃತ್ತ ಎಸ್ಪಿ ರವಿನಾರಾಯಣ, ಹಿರಿಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಖಜಾಂಚಿ ಎಸ್.ಮಲ್ಲಿಕಾರ್ಜುನ, ಆದಾಪುರ ನಾಗರಾಜ, ಸಿ.ಬಸವರಾಜ, ಜಿ.ರಾಕೇಶ ಗಾಂಧಿ ನಗರ, ವಕೀಲ ಮಂಜಪ್ಪ ಹಲಗೇರಿ, ಬಿ.ಆರ್.ಶಿವಮೂರ್ತಿ, ಶಿರಮಗೊಂಡನಹಳ್ಳಿ ನಿಂಗರಾಜ ಇತರರು ಇದ್ದರು.