- ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆಕ್ರೋಶ । ಎಸ್‌ಪಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ - - -ಕನ್ನಡಪ್ರಭ ವಾರ್ತೆ ದಾವಣಗೆರೆಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ, ಮಾದಿಗ ಸಮುದಾಯದ ವಿವಿಧ ಸಂಘಟನೆಗಳು ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಪಕ್ಕದ ಆನಂದ ರೆಸಿಡೆನ್ಸಿ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ಹಳೇ ಪಿ.ಬಿ. ರಸ್ತೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಒಳ ಮೀಸಲಾತಿಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆದ ಘಟನೆ ಸಹ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಹೊತ್ತಿಗೆ ಎಲ್ಲರನ್ನೂ ಬಿಡುಗಡೆ ಮಾಡಿದರು.

ಶುಕ್ರವಾರ ಬೆಳಗ್ಗೆ ಜಿಲ್ಲೆಯ ವಿವಿಧ ತಾಲೂಕು, ಗ್ರಾಮಾಂತರ ಪ್ರದೇಶದಿಂದ ನೀಲಿಬಣ್ಣದ ಶಾಲು ಧರಿಸಿ, ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಹಲಗೆ ಬಾರಿಸುತ್ತ 6 ಗಂಟೆಯಿಂದಲೇ ಜಿಲ್ಲಾ ಕೇಂದ್ರದ ವಿವಿಧೆಡೆ ಅಂಗಡಿ- ಮುಂಗ್ಗಟ್ಟುಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು. ಒಳಮೀಸಲಾತಿ ಕಲ್ಪಿಸಿದ ನಂತರವೇ 56 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿ ಮಾಡಿಕೊಳ್ಳಬೇಕು ಎಂದರು.

ಬೈಕ್‌, ಸ್ಕೂಟರ್‌ ರ್ಯಾಲಿ ಮಾಡುತ್ತ ಹಳೇ ಪಿ.ಬಿ. ರಸ್ತೆ ಸಂಪೂರ್ಣ ಬಂದ್ ಮಾಡಿಸಿದರು. ಮಾರುಕಟ್ಟೆ ಪ್ರದೇಶ, ಜನದಟ್ಟಣೆ, ವಾಹನದಟ್ಟಣೆ ಪ್ರದೇಶ, ಪ್ರಮುಖ ವೃತ್ತ, ರಸ್ತೆಗಳು, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣಗಳ ಬಳಿ ಪ್ರತಿಭಟನೆ ನಡೆಸಿದರು. ಪೊಲೀಸರು ಟೈರ್‌ಗಳಿಗೆ ಬೆಂಕಿ ಹಚ್ಚದಂತೆ ತಿಳಿಸುತ್ತ, ಬೆಂಕಿಯನ್ನು ನಂದಿಸಿದರು. ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಆವರಣ, ರಸ್ತೆಗಳಲ್ಲಿ ಸಾಗುತ್ತಿದ್ದ ಬಸ್‌ಗಳನ್ನು ತಡೆದು, ಬಸ್‌ಗಳ ಚಕ್ರಕ್ಕೆ ಅಡ್ಡವಾಗಿ ಮಲಗಿ ಒಳ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿದರು.

ಬಸ್‌ಗಳು, ಆಟೋಗಳಿಲ್ಲದೇ ಪ್ರಯಾಣಿಕರಿಗೆ ತೊಂದರೆಯಾಯಿತು. ಪೊಲೀಸ್ ಇಲಾಖೆ ಮುನ್ನೆಚ್ಚರಿಕೆಯಾಗಿ ಎಲ್ಲ ಕಡೆ ಸೂಕ್ತ ಭದ್ರತೆ ಕಲ್ಪಿಸಿದ್ದರಿಂದ ಅಗತ್ಯ ವಸ್ತುಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿಲ್ಲ. ಸಮಿತಿ ಮುಖಂಡರಾದ ಆಲೂರು ನಿಂಗರಾಜ, ಡಾ.ಎಚ್.ವಿಶ್ವನಾಥ, ಸಮಾಜದ ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಎಚ್.ಮಲ್ಲೇಶ, ಸಿ.ಬಸವರಾಜ, ಎಸ್.ಮಲ್ಲಿಕಾರ್ಜುನ, ಎಲ್.ಎಂ.ಎಚ್. ಸಾಗರ್, ಕುಂದುವಾಡ ಮಂಜುನಾಥ, ರಾಘವೇಂದ್ರ ಕಡೇಮನಿ, ಕೆಟಿಜೆ ನಗರ ರವಿ, ಟಿ.ರವಿಕುಮಾರ, ಮಲ್ಲಿಕಾರ್ಜುನ ವಂದಾಳಿ ಸೇರಿದಂತೆ ಸಾವಿರಾರು ಮಾದಿಗ ಬಂಧುಗಳು ಪ್ರತಿಭಟನೆಯಲ್ಲಿದ್ದರು.

- - -


(-ಫೋಟೋಗಳಿವೆ.)