ಮಡಿಕೇರಿ: ಇತ್ತೀಚೆಗೆ ಕೊಡಗಿನಿಂದ ಬಿಡದಿಯಲ್ಲಿ ನಡೆಯುತ್ತಿದ್ದ ರೈತ ಹೋರಾಟಕ್ಕೆ ತೆರಳುವಾಗ ಕೊಡಗಿನ ರೈತರನ್ನು ಮಾತ್ರ ತಡೆದು ಬಂಧಿಸಿದ ಪೊಲೀಸ್ ಕ್ರಮವನ್ನು ಖಂಡಿಸಿ ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಕಾರ್ಯಕರ್ತರು ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬಿಡದಿಯ ಶಾಂತಿಯುತ ಹೋರಾಟದಲ್ಲಿ ಪಾಲ್ಗೊಳ್ಳಲು ಜು.24ರಂದು ತೆರಳುತ್ತಿದ್ದ ವೇಳೆ ಕೊಡ್ಲಿಪೇಟೆ ಮತ್ತು ತಿತಿಮತಿ ಗೇಟ್ ಬಳಿ ಕೊಡಗಿನ ರೈತರನ್ನು ಮಾತ್ರ ತಡೆದಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಎಸ್ಪಿ ಬಿಂದುಮಣಿ ಅವರು ಸ್ಥಳಕ್ಕೆ ಬಂದು ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಆಗಮಿಸಿದ ಎಸ್ಪಿ ಬಿಂದುಮಣಿ ಅವರನ್ನು ರೈತ ಮುಖಂಡರು ಪ್ರಶ್ನಿಸಿದರು. ಬಿಡದಿಗೆ ಹೋಗುತ್ತಿದ್ದ ರೈತರನ್ನು ಬಂಧಿಸಿದ್ದೇಕೆ? ಇತರ ಜಿಲ್ಲೆಗಳ ರೈತರಿಗೆ ಅವಕಾಶ ನೀಡಿ ಕೊಡಗಿನ ರೈತರನ್ನು ಮಾತ್ರ ಯಾಕೆ ತಡೆದಿರಿ? ಇದು ರಾಜಕೀಯ ಒತ್ತಡದಿಂದ ಕೂಡಿದ ಕ್ರಮ ಎಂದು ಆರೋಪಿಸಿದರು.ರೈತ ಚಳವಳಿ ಹತ್ತಿಕ್ಕುವ ಪೊಲೀಸ್ ಧೋರಣೆಯನ್ನು ಕೈಬಿಡಬೇಕು. ಶಾಂತಿಯುತವಾಗಿ ಪ್ರತಿಭಟಿಸುವುದು ಪ್ರತಿಯೊಬ್ಬರ ಸಂವಿಧಾನಿಕ ಹಕ್ಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.ಸೋಮವಾರಪೇಟೆ ರೈತ ಸಂಘದ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ, ಎಚ್.ಡಿ. ಕೋಟೆ ಮಹಾದೇವ ನಾಯಕ್ ಸೇರಿದಂತೆ ಇತರ ಮುಖಂಡರು ಮಾತನಾಡಿ, ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು ಅವಮಾನ. ಹಕ್ಕುಗಾಗಿ ಹೋರಾಡುವವರ ಮೇಲೆ ಅನಗತ್ಯ ನಿರ್ಬಂಧ ಹೇರಬೇಡಿ ಎಂದು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕಾನೂನಾತ್ಮಕ ಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ ಶಾಂತಿಯುತವಾಗಿ ಹೋರಾಟಕ್ಕೆ ಹೋಗುತ್ತಿದ್ದವರನ್ನು ಬಂಧಿಸಿದ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಎಸ್ಪಿ ಅವರ ಪಾತ್ರವಿದ್ದರೆ ಅಮಾನತಿಗೆ ಒತ್ತಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಬಿಂದುಮಣಿ, ಇಲಾಖೆಯ ಲಿಖಿತ ಆದೇಶ ಮತ್ತು ಗುಪ್ತಚರ ಇಲಾಖೆಯ ಮಾಹಿತಿ ಆಧಾರದ ಮೇಲೆ ಕ್ರಮ ಜರುಗಿಸಲಾಗಿದೆ. ವೈಯಕ್ತಿಕ ಕಾರಣವೇನೂ ಇಲ್ಲ. ನಿಯಮದಂತೆ ಕಾರ್ಯನಿರ್ವಹಿಸಲಾಗಿದೆ ಎಂದು ಹೇಳಿದರು.ಸೋಮವಾರಪೇಟೆ ರೈತ ಸಂಘದ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ, ಎಚ್.ಡಿ. ಕೋಟೆ ರೈತ ಮುಖಂಡ ಮಹಾದೇವ ನಾಯಕ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಿವಣ್ಣ, ಮೈಸೂರು ರೈತ ಮುಖಂಡ ಲೋಕೇಶ್ ರಾಜೇ ಅರಸು, ಮೈಸೂರು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸರಗೂರು ನಟರಾಜ್, ಸಿಐಟಿಯು ಮುಖಂಡ ಪಿ.ಆರ್. ಭರತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್, ವಿರಾಜಪೇಟೆ ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಪೊನ್ನಂಪೇಟೆ ಅಧ್ಯಕ್ಷ ಆಲೆಮಾಡ ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.