ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿನ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ದಾಳಿಯನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು.ಜಾಮಿಯಾ ಮಸೀದಿ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಸುತ್ತಮುತ್ತ ವಿವಿಧ ಮಸೀದಿಗಳ ಸಹಯೋಗದೊಂದಿಗೆ ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ನಡೆದ ಬೃಹತ್ ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ಮಹಮ್ಮದ್ ಮಾತನಾಡಿ, ಭಯೋತ್ಪಾದನಾ ದಾಳಿಯನ್ನು ಖಂಡಿಸಿದರು.
ಭಾರತ ದೇಶದಲ್ಲಿ ಎಲ್ಲ ಧರ್ಮದ ಜನರು ಒಂದೇ ಎಂಬ ಭಾವನೆಯಲ್ಲಿ ನಾವು ಬದುಕುತ್ತಿದ್ದೇವೆ. ದೇಶದ ಕೊನೆಯ ಹಂತದ ನಾಗರಿಕರಿಗೆ ತೊಂದರೆಯಾದಲ್ಲಿ ನಮ್ಮ ಮುಸ್ಲಿಂ ಸಂಘಟನೆ ನ್ಯಾಯದ ಪರ ಇರುತ್ತದೆ. ಕಾಶ್ಮೀರದಲ್ಲಿ ಹತ್ಯೆಗೆ ಒಳಗಾದ ಜನರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.ಎಸ್ಡಿಪಿಐ ನಗರಾಧ್ಯಕ್ಷ ಜಕ್ರಿಯ ಮಾತನಾಡಿ, ಧರ್ಮ, ಭಾಷೆ ಭೇದ ಮರೆತು ಭಯೋತ್ಪಾದಕರ ದಾಳಿಯ ವಿರುದ್ಧ ಹೋರಾಡುವ ಅವಶ್ಯಕತೆ ಇದೆ. ಸಹೋದರ ಸಹೋದರಿಯರ ಹತ್ಯೆಯನ್ನು ಮಾಡಿದ ಆಗಂತುಕರಿಗೆ ಭಾರತದಲ್ಲಿ ಗಲ್ಲು ಶಿಕ್ಷೆಗಿಂತ ಮಿಗಿಲಾದ ಶಿಕ್ಷೆ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಭಾರತದಲ್ಲಿ ಕಾಶ್ಮೀರದಂತ ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳಿದಾಗ ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಪ್ರಮುಖರಾದ ಮುಬಿನ್, ರಫೀಕ್, ಸ್ಥಳೀಯ ನೂರ್ ಮಸೀದಿಯ ಇರ್ಫಾನ್ ಬಿಲಾಲ್, ಮಸೀದಿ ಅಧ್ಯಕ್ಷ ಮುಜೀಬ್, ಹಿಲಾಲ್ ಮಸೀದಿಯ ಮಜೀದ್, ದಾರುಲ್ ಉಲೂಂ ಮದರಸ ಪ್ರಾಂಶುಪಾಲ ತಂಬ್ಲಿಕ್ ದಾರಿಮಿ, ಮದರಸ ಕಮಿಟಿ ಸದಸ್ಯರು ಸಮುದಾಯದ ಪ್ರಮುಖರು ಇದ್ದರು.