ನರಗುಂದ: ಉತ್ತರ ಕರ್ನಾಟಕ ಭಾಗದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ರೈತ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.
ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ನಿಯೋಗದೊಂದಿಗೆ ಭೇಟಿ ನೀಡಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ ಭಾಗದ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಯೋಜನೆ ಜಾರಿ ಮಾಡಬೇಕೆಂದು ಕಳೆದ 11 ವರ್ಷದಿಂದ ಬಂಡಾಯ ನೆಲದಲ್ಲಿ ನಿರಂತರ ಹೋರಾಟ ಮಾಡಿದರೂ ಆಳುವ ಸರ್ಕಾರ ನಿರ್ಲಕ್ಷ್ಯ ತೋರಿದೆ.ನೂತನ ಜಲ ಸಂಪನ್ಮೂಲ ಸಚಿವರು ಸರ್ವಪಕ್ಷ ಹಾಗೂ ರೈತರ ನಿಯೋಗವನ್ನು ತೆಗೆದುಕೊಂಡು ಹೋಗಿ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು. ಅದೇ ರೀತಿ ನರಗುಂದ ತಾಲೂಕಿನ ವಾಸನ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ರಾಮದುರ್ಗ ತಾಲೂಕಿನ ಲಕನಾಯಕನ ಕೊಪ್ಪದ ನೀರಾವರಿ ಕಾಲುವೆ ದುರಸ್ತಿ ಮುಂತಾದವುಗಳ ಬಗ್ಗೆ ಶೀಘ್ರವಾಗಿ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಆಗ್ರಹಿಸಿದರು.
ಸಚಿವ ರಾಮಲಿಂಗಾರೆಡ್ಡಿಯವರು ರೈತಸೇನೆ ಸಂಘಟನೆ ನಿಯೋಗದ ರೈತರ ಮನವಿ ಸ್ವೀಕರಿಸಿ, ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಜರೂರಾಗಿ ಸಭೆ ಕರೆಯಲಾಗುವುದೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ನರಗುಂದ, ನವಲಗುಂದ, ರೋಣ, ರಾಮದುರ್ಗ, ಬಾದಾಮಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ರೈತಸೇನೆ ಸಂಘಟನೆ ಪದಾಧಿಕಾರಿಗಳು ಇದ್ದರು. ಗುರು ಬ್ರಹ್ಮಾನಂದ ಜಾತ್ರೆ ಪ್ರಯುಕ್ತ ವಿವಿಧ ಕಾರ್ಯಕ್ರಮ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಪವಾಡ ಪುರುಷರಾದ ಗುರು ಬ್ರಹ್ಮಾನಂದ ಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಜೂ. 19ರಂದು ಸಂಜೆ ಗ್ರಾಮದ ದೇವತೆಗಳಾದ ದ್ಯಾಮಮ್ಮ ಮತ್ತು ದುರ್ಗಾದೇವಿ, ಭಂಡಮ್ಮದೇವಿ ಉಡಿ ತುಂಬಿವ ಕಾರ್ಯಕ್ರಮ ಜರುಗಲಿದೆ.ಜೂ. 20ರಂದು ಸಂಜೆ 5 ಗಂಟೆಗೆ ಗ್ರಾಮದ ಮಾರುತೇಶ್ವರ ದೇವಸ್ಥಾನದ ಮುಂದಿನ ಹೊಂಡ ತುಂಬುವ ಕಾರ್ಯಕ್ರಮ, ಜೂ. 21ರಂದು ಬೆಳಗ್ಗೆ 8 ಗಂಟೆಗೆ ಹೊಂಡ ಪೂಜೆ ಕಾರ್ಯಕ್ರಮ ಜರುಗುವುದು. ಜೂ. 22ರಂದು ಬೆಳಗ್ಗೆ 6.30ಕ್ಕೆ ಗುರು ಬ್ರಹ್ಮಾನಂದ ದೇವಸ್ಥಾನದಲ್ಲಿ ಗುರು ಬ್ರಹ್ಮಾನಂದ ಶ್ರೀಗಳು ಹಾಗೂ ಬಸವಣ್ಣ ದೇವರ ಮೂರ್ತಿಗೆ ರುದ್ರಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಶಾಂತಲಿಂಗ ಶ್ರೀಗಳ ನೇತೃತ್ವದಲ್ಲಿ ಬ್ರಹ್ಮಾನಂದ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಸಂಜೆ 9 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರು ಬ್ರಹ್ಮಾನಂದರ ಮೂರ್ತಿ ಮೆರವಣಿಗೆ ನಡೆಯುತ್ತದೆ. ರಾತ್ರಿ 10.30ಕ್ಕೆ ನಾಟಕ ಪ್ರದರ್ಶನವಿದೆ ಎಂದು ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.