ಸಾರಾಂಶ
ಹಂಪಿಯಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜನರು ಆಗಮಿಸಿ ಪಿತೃಗಳಿಗೆ ತರ್ಪಣ ನೀಡಿದರು.
ಹೊಸಪೇಟೆ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ದಕ್ಷಿಣಕಾಶಿ ಖ್ಯಾತಿಯ ಹಂಪಿಯ ತುಂಗಭದ್ರಾ ನದಿ ತಟದಲ್ಲಿ ಸಹಸ್ರಾರು ಜನರು ಬುಧವಾರ ಪಿತೃಗಳಿಗೆ ತರ್ಪಣ ನೀಡಿದರು.ಹಂಪಿಯ ನದಿ ತೀರದಲ್ಲಿರುವ ವೈದಿಕ ಮಂಟಪದಲ್ಲಿ ಕುಟುಂಬ ಸಮೇತ ಅಗಲಿದ ಗುರು-ಹಿರಿಯರಿಗೆ ಪೂಜೆ ಸಲ್ಲಿಸಿ ಪಿತೃಗಳಿಗೆ ತರ್ಪಣ ನೀಡಿದರು.
ಐತಿಹಾಸಿಕ ಹಂಪಿಯ ತುಂಗಭದ್ರಾ ತಟದಲ್ಲಿ ಕುಟುಂಬ ಸಮೇತರಾಗಿ ಬಂದು ಹಿರಿಯರಿಗೆ ವಸ್ತ್ರ ಸಮರ್ಪಣೆ, ತರ್ಪಣಾದಿಗಳನ್ನು ನೀಡುವುದು ಹಿಂದೂ ಧರ್ಮದ ಭಾಗವಾಗಿದೆ. ಹಂಪಿಯಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಜನರು ಆಗಮಿಸಿ ಪಿತೃಗಳಿಗೆ ತರ್ಪಣ ನೀಡಿದರು. ಈ ಧಾರ್ಮಿಕ ನಂಬಿಕೆಯ ಕಾರ್ಯಕ್ಕೆ ಸ್ಥಳೀಯ ಪುರೋಹಿತರು ವ್ಯವಸ್ಥೆ ಕಲ್ಪಿಸಿದರು.ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನಲಾಗುತ್ತದೆ. ಇದು ಪಿತೃಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಅ.೩ರಿಂದ ನವರಾತ್ರಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅಗಲಿದ ಪಿತೃಗಳನ್ನು ನೇರವಾಗಿ ಸ್ಮರಿಸಲು ವರ್ಷದಲ್ಲೊಮ್ಮೆ ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯನ್ನು ಆಚರಿಸುವುದು ರೂಢಿ. ಆ ದಿನ, ಅಗಲಿದವರನ್ನು ಸ್ಮರಿಸಿ, ತಿಲತರ್ಪಣ, ಜಲತರ್ಪಣ, ಬಲಿ ಹಾಗೂ ಪಿಂಡ ನೀಡಿ ಸ್ಮರಿಸಲಾಗುತ್ತದೆ.
ಹಂಪಿ ತುಂಗಭದ್ರಾ ನದಿ ತೀರದಲ್ಲಿ ಪಿತೃಗಳಿಗೆ ತರ್ಪಣ ನೀಡಿದರು.