ಸಾರಾಂಶ
ಹೊಸದುರ್ಗ: ರಂಗಭೂಮಿಗೆ ಸಲ್ಲಿಸಿದ ಕೊಡುಗೆಯನ್ನು ಆಧರಿಸಿ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘವು ನೀಡುವ ಪ್ರತಿಷ್ಠಿತಿ ಶಿವಕುಮಾರ ಪ್ರಶಸ್ತಿಯು ಈ ಬಾರಿ ಇಳಕಲ್ಲಿನ ಹಿರಿಯ ರಂಗಕರ್ಮಿ ಮಹಾಂತೇಶ್ ಎಂ.ಗಜೇಂದ್ರಗಡ ಅವರಿಗೆ ಒಲಿದಿದೆ.
ಕಳೆದ ೪೨ ವರ್ಷಗಳಿಂದ ಮಹಾಂತೇಶ್ ಅವರು ರಂಗಕರ್ಮಿ, ರಂಗಸಂಘಟಕ, ಕಲಾವಿದ, ಕಲಾ ನಿರ್ದೇಶಕರಾಗಿ ರಂಗಭೂಮಿಗೆ ವಿಶೇಷ ಕೆಲಸ ಮಾಡಿದ್ದಾರೆ. ವಿಶೇಷವೆಂದರೆ ಅವರು ವೃತ್ತಿ ನಾಟಕ ಕಂಪನಿಗಳಲ್ಲಿಯೂ ಅವಿರತ ಕೆಲಸ ಮಾಡಿದ್ದಾರೆ.ಶಿವಕುಮಾರ ಕಲಾಸಂಘದ ಮಹಾಪೋಷಕರಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿನ ಆಯ್ಕೆ ಸಮಿತಿ ಮಹಾಂತೇಶ್ ಅವರನ್ನು ಈ ಬಾರಿಯ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಿಳಿಸಿದ್ದಾರೆ.
ಪ್ರಶಸ್ತಿಯು ೫೦ ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ನವೆಂಬರ ೪ ರಿಂದ ೯ ರವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.೨೦೦೪ ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ನೀಡುತ್ತಿರುವ ಶಿವಕುಮಾರ ಪ್ರಶಸ್ತಿಗೆ ಪ್ರಸನ್ನ (೨೦೦೪), ಸಿಜಿಕೆ (೨೦೦೫), ಪಿ.ಜಿ.ಗಂಗಾಧರಸ್ವಾಮಿ (೨೦೦೬), ಅಶೋಕ ಬಾದರದಿನ್ನಿ (೨೦೦೭), ಮಾಲತಿಶ್ರೀ (೨೦೦೮), ಸಿ.ಬಸವಲಿಂಗಯ್ಯ (೨೦೧೦), ಬಿ. ಜಯಶ್ರೀ (೨೦೧೧), ಡಾ.ಕೆ.ಮರುಳಸಿದ್ಧಪ್ಪ (೨೦೧೨), ಚಿದಂಬರರಾವ್ ಜಂಬೆ (೨೦೧೨), ಕೋಟಗಾನಹಳ್ಳಿ ರಾಮಯ್ಯ (೨೦೧೪), ಡಾ.ಸುಭದ್ರಮ್ಮ ಮನ್ಸೂರು (೨೦೧೫), ಲಕ್ಷ್ಮೀ ಚಂದ್ರಶೇಖರ್ (೨೦೧೬), ಶ್ರೀನಿವಾಸ.ಜಿ ಕಪ್ಪಣ್ಣ (೨೦೧೭), ಬಸವರಾಜ ಬೆಂಗೇರಿ (೨೦೧೮), ಟಿ.ಎಸ್.ನಾಗಾಭರಣ (೨೦೧೯), ಕೆ.ವಿ.ನಾಗರಾಜಮೂರ್ತಿ (೨೦೨೧), ಡಾ.ಎಂ.ಜಿ.ಈಶ್ವರಪ್ಪ (೨೦೨೨), ಶಶಿಧರ ಅಡಪ (೨೦೨೩) ಭಾಜನರಾಗಿದ್ದರು ಎಂದು ಶ್ರೀಗಳು ವಿವರಿಸಿದ್ದಾರೆ.