ಸಾರಾಂಶ
ಯಾವುದೇ ನೋವು ಮತ್ತು ಅನ್ಯಾಯದ ವಿರುದ್ಧ ಚಳವಳಿ ನಡೆಯುತ್ತಿದ್ದರೂ ಅಲ್ಲಿ ಶಾಶ್ವತವಾಗಿ ನಾವು ಎರಡು ಭಾವಚಿತ್ರಗಳನ್ನು ಕಾಣುತ್ತೇವೆ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ಕಾಲಘಟ್ಟದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಅಗತ್ಯ, ಅವಶ್ಯಕ ಮತ್ತು ಅನಿವಾರ್ಯ ಎಂದು ಮಂಡ್ಯ ಜಿಲ್ಲೆಯ ಅಣ್ಣೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ದೊಡ್ಡಬೋರಯ್ಯ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಮಾತನಾಡಿದ ಅವರು, ಯಾವುದೇ ನೋವು ಮತ್ತು ಅನ್ಯಾಯದ ವಿರುದ್ಧ ಚಳವಳಿ ನಡೆಯುತ್ತಿದ್ದರೂ ಅಲ್ಲಿ ಶಾಶ್ವತವಾಗಿ ನಾವು ಎರಡು ಭಾವಚಿತ್ರಗಳನ್ನು ಕಾಣುತ್ತೇವೆ. ಒಂದು ಮಹಾತ್ಮ ಗಾಂಧಿ ಅವರದ್ದು ಮತ್ತೊಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು. ಭಾರತ ಕಂಡಂತಹ ಪ್ರಪ್ರಥಮ ಮತ್ತು ಪ್ರಬಲ ಮಹಿಳಾವಾದಿ ಅಂಬೇಡ್ಕರ್ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ರಾಜಶೇಖರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಗಾಯಕ ಅಮ್ಮ ರಾಮಚಂದ್ರ ಸಂವಿಧಾನ ಪೀಠಿಕೆಯನ್ನು ಹಾಡಿದರು. ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ಡಾ.ಜಿ.ಬಿ. ದೊರೆಸ್ವಾಮಿ ಸ್ವಾಗತಿಸಿದರು. ಅಧ್ಯಾಪಕ ಖಜಾಂಚಿ ಡಾ. ಅಶ್ವಿನಿ ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕ ಎಂ. ನಂಜುಂಡಯ್ಯ ವಂದಿಸಿದರು.