ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಕಳಲೆ ಗ್ರಾಮದ ಐತಿಹಾಸಿಕ ಲಕ್ಷ್ಮೀ ಕಾಂತಸ್ವಾಮಿ ದೇವಾಲಯದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಪವಿತ್ರೋತ್ಸವದ ಅಂಗವಾಗಿ ಶ್ರೀ ಅರವಿಂದ ನಾಯಕಿಯವರ ಮಹಾರಥೋತ್ಸವವು ಗುರುವಾರ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.ನವರಾತ್ರಿ ಮಹೋತ್ಸವ ಮತ್ತು ಪವಿತ್ರೋತ್ಸವದ ಅಂಗವಾಗಿ ಅ. 2 ರಿಂದಲೇ ಪ್ರತಿದಿನ 9 ದಿನಗಳ ಕಾಲ ಸಂಜೆ 7ಕ್ಕೆ ಶ್ರೀ ಲಕ್ಷ್ಮೀಕಾಂತಸ್ವಾಮಿ ಅವರ ಮಂಟಪೋತ್ಸವ ಹಾಗೂ ವೇದ ಪಾರಾಯಣ ಕಾರ್ಯಕ್ರಮವು ಜರುಗಿದವು. ತಸ್ಸಂಬದ್ಧವಾಗಿ ಗುರುವಾರ ಬೆಳಗ್ಗೆ 10.45 ರಿಂದ 11.45 ರವರೆಗೆ ಶುಭ ಲಗ್ನದಲ್ಲಿ ಶ್ರೀ ಅರವಿಂದ ನಾಯಕಿ ಅಮ್ಮನವರ ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಸ್ಥಾನ ಸೇರಿತು. ರಥೋತ್ಸವ ಸಂಚರಿಸುವ ಮಾರ್ಗದಲ್ಲಿ ಭಕ್ತರು ಇಷ್ಟಾರ್ಥ ನೆರವೇರಿಸುವಂತೆ ಹರಕೆ ಕಟ್ಟಿ ಭಕ್ತಿ ಮೆರೆದರು.ದೇವಾಲಯದ ಪಾರುಪತ್ತೆದಾರ್ ಜಯರಾಮು ಮಾತನಾಡಿ, ನವರಾತ್ರಿ ಮಹಾಸಭಾ ಹಾಗೂ ಪವಿತ್ರೋತ್ಸವದ ಅಂಗವಾಗಿ ಲಕ್ಷ್ಮೀಕಾಂತಸ್ವಾಮಿ ದೇವಾಲಯದಲ್ಲಿ ಪ್ರತಿದಿನ 9 ದಿನಗಳ ಕಾಲ ವೇದಪಾರಾಯಣ, ಮಂಟಪೋತ್ಸವ ಜರುಗದಲಿದೆ. ಗುರುವಾರ ರಥೋತ್ಸವವೂ ವಿಜೃಂಭಣೆಯಿಂದ ಜರುಗಿದ್ದು. ಅ. 12ರಂದು ಬನ್ನಿಮಂಟಪೋತ್ಸವ, ಸಂಜೆ 9 ಗಂಟೆಗೆ ಪವಿತ್ರೋತ್ಸವ, ನಂತರ ಅಂಕುರಾರ್ಪಣೆ ಜರುಗಲಿದೆ. ಅ. 15 ರಂದು ಬೆಳಗ್ಗೆ ಪವಿತ್ರೋತ್ಸವ ರಾತ್ರಿ ಪೂರ್ಣಾಹುತಿಯೊಂದಿಗೆ ಅರವಿಂದ ನಾಯಕಿ ಅಮ್ಮನವರ ನವರಾತ್ರಿ ಮಹೋತ್ಸವ ಹಾಗೂ ಪವಿತ್ರೋತ್ಸವ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ ಎಂದರು.