ಮಹರ್ಷಿ ವಾಲ್ಮೀಕಿ ಅಗಣಿತ ಗುಣಗಳ ಗಣಿ: ಸಿ.ಟಿ.ರವಿ

| Published : Oct 08 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ರಾಮ ಹೇಗೆ ಗುಣಗಳ ಗಣಿಯೋ ಹಾಗೇ ಆ ರಾಮನ ವ್ಯಕ್ತಿತ್ವವನ್ನು ಮರೆಯದಂತೆ ನಮ್ಮ ಹೃದಯದಲ್ಲಿ ಅಚ್ಚಾಗುವಂತೆ ಮಾಡಿರುವ ಮಹರ್ಷಿ ವಾಲ್ಮೀಕಿಯವರು ಅಗಣಿತ ಗುಣಗಳ ಗಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

- ರಾಮಾಯಣ- ಮಹಾಭಾರತ ಭಾರತದ ಚಾರಿತ್ರಿಕ ಮಹಾ ಕಾವ್ಯಗಳು । ಚಿಕ್ಕಮಗಳೂರಿನ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಮ ಹೇಗೆ ಗುಣಗಳ ಗಣಿಯೋ ಹಾಗೇ ಆ ರಾಮನ ವ್ಯಕ್ತಿತ್ವವನ್ನು ಮರೆಯದಂತೆ ನಮ್ಮ ಹೃದಯದಲ್ಲಿ ಅಚ್ಚಾಗುವಂತೆ ಮಾಡಿರುವ ಮಹರ್ಷಿ ವಾಲ್ಮೀಕಿಯವರು ಅಗಣಿತ ಗುಣಗಳ ಗಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತ ಭಾರತದ ಚಾರಿತ್ರಿಕ ಮಹಾ ಕಾವ್ಯ ಗಳು, ರಾಮನ ವ್ಯಕ್ತಿತ್ವ. ಆದರ್ಶ, ರಾಮಾಯಣದ ಕಾಲಘಟ್ಟವನ್ನು ಸಾವಿರಾರು ವರ್ಷಗಳ ನಂತರವೂ ನಮ್ಮ ಹೃದಯ ದಲ್ಲಿ ಉಳಿಯಲು ಮಹರ್ಷಿ ವಾಲ್ಮೀಕಿಯವರು ಕಾರಣೀ ಭೂತರಾಗಿದ್ದಾರೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ತಮ್ಮ ಕಾವ್ಯದ ಮೂಲಕ ಸಾಮರಸ್ಯ, ಪ್ರೀತಿ, ತ್ಯಾಗ ಮತ್ತು ಅಭಿವೃದ್ಧಿ ಆಧರಿತ ಆಡಳಿತವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದ ಅವರು, ಪ್ರತಿಭೆ ಹುಟ್ಟಿನ ಉಡುಗೊರೆ ಅಲ್ಲ, ಸಾಧನೆ ಗಳಿಕೆ ಎನ್ನುವುದನ್ನು ರಾಮಾಯಣ ಮಹಾಕಾವ್ಯ ಬರೆದು ತೋರಿಸಿದ ದಲಿತ ಪ್ರತಿಭೆ, ಆದಿ ಕವಿ ವಾಲ್ಮೀಕಿ ಯವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು. ಕಟ್ಟುಕತೆಗಳಿಂದ ಹುಟ್ಟಿಕೊಂಡಿರುವ ಪೂರ್ವಗ್ರಹಗಳನ್ನು ಪಕ್ಕಕ್ಕಿಟ್ಟು ಈ ಸಾಧಕನ ನೈಜ ಜೀವನಗಾಥೆ ಅಧ್ಯಯನ ತಳ ಸಮುದಾಯಗಳ ಕೋಟ್ಯಂತರ ಪ್ರತಿಭೆಗಳಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸ ಹುಟ್ಟಿಸಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರು. ಅವರನ್ನು ಅತ್ಯಂತ ಗೌರವದಿಂದ ಆದಿಕವಿ ಎನ್ನಲಾಗುತ್ತದೆ. ದೇಶದಲ್ಲಿ ರಾಮಾಯಣ, ಮಹಾಭಾರತ ಎಲ್ಲರ ಬದುಕಿಗೆ ಆದರ್ಶದ ಮಹಾ ಕಾವ್ಯಗಳಾಗಿವೆ. ರಾಮಾಯಣವನ್ನು ವಾಲ್ಮೀಕಿ, ಮಹಾಭಾರತವನ್ನು ವೇದ ವ್ಯಾಸರು ರಚಿಸಿದರು. ಈ ಮಹಾನ್ ಗ್ರಂಥಗಳನ್ನು ರಚಿಸಿದ ಇವರಿಬ್ಬರೂ ಶೋಷಿತ ವರ್ಗ ದಿಂದ ಬಂದವರು ಎಂಬುದು ಹೆಮ್ಮೆ ವಿಷಯ ಎಂದರು.ಸರ್ಕಾರ ಹಲವಾರು ಯೋಜನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುತ್ತಿದೆ. ಸಕಾಲದಲ್ಲಿ ಕೆಲವೊಂದು ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ ಅವರು, ಚಿಕ್ಕ ಮಗಳೂರಿನ ವಾಲ್ಮೀಕಿ ಭವನಕ್ಕೆ ಪೀಠೋಪಕರಣ ಒದಗಿಸಲು ₹10 ಲಕ್ಷ ಮೀಸಲಿಟ್ಟಿರುವುದಾಗಿ ತಿಳಿಸಿದರು.ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಪತಿ ಹಳಗುಂದ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿ, ರಾಮಾಯಣ ಎಂದರೆ ವಾಲ್ಮೀಕಿ ನೆನಪಾಗುವುದು ಸಹಜ. ವಾಲ್ಮೀಕಿ ಕೆತ್ತಿದ ನೂರಾರು ಪಾತ್ರ ಗಳಿಗೆ ದೇವರ ಮಂದಿರವಿದೆ. ಗುಡಿ ಗೋಪುರಗಳಿವೆ. ಆದರೆ ವಾಲ್ಮೀಕಿಗೆ ಮಾತ್ರ ದೇವಾಲಯವಿಲ್ಲ. ಆತ ಕೆತ್ತಿದ ರಾಮ ದೇವನಾದ, ವಾಲ್ಮೀಕಿ ಮಹಾನ್ ದೇವನಾಗಿ ಇವತ್ತು ನಮ್ಮ ಮುಂದೆಯಿದ್ದಾರೆ. ರಾಮ ನಿಮ್ಮ ಪಾಲಿಗೆ ಋಷಿಯಾಗಿರ ಬಹುದು, ವಾಲ್ಮೀಕಿಯವರು ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ ಎಂದು ಹೇಳಿದರು.ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರನೆಂಬ ಒಬ್ಬ ಬೇಡನಾಗಿದ್ದ. ನಾರದ ಮುನಿ ಪ್ರೇರಣೆಯಿಂದ ರಾಮ ಭಕ್ತನಾಗಿ, ರಾಮಾಯಣ ರಚಿಸಿದ ಮೊದಲ ಕವಿಯಾಗಿ ಪ್ರಸಿದ್ಧರಾದರು. ಸಂಸ್ಕೃತ ಸಾಹಿತ್ಯದಲ್ಲಿ ಅವರ ಮಹತ್ವವನ್ನು,ರಾಮಾಯಣದ ಶ್ರೇಷ್ಠತೆ ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಎತ್ತಿ ತೋರಿಸಲಾಗಿದೆ. ಒಮ್ಮೆ ಜೋಡಿ ಕ್ರೌಂಚ ಪಕ್ಷಿಗಳನ್ನು ನೋಡುತ್ತಿದ್ದಾಗ, ಬೇಟೆ ಗಾರನೊಬ್ಬ ಒಂದು ಹಕ್ಕಿಯನ್ನು ಕೊಂದಾಗ, ವಾಲ್ಮೀಕಿ ಕೋಪಗೊಂಡು ಬೇಟೆಗಾರನಿಗೆ ಶಾಪ ನೀಡುತ್ತಾನೆ. ಇದರಿಂದ ಅವರೊ ಳಗಿನ ಕವಿತಾ ಪ್ರತಿಭೆ ಹೊರಹೊಮ್ಮುತ್ತದೆ. ಇದು ರಾಮಾಯಣ ಬರೆಯಲು ಸ್ಫೂರ್ತಿ ನೀಡುತ್ತದೆ. ಮಹರ್ಷಿ ವಾಲ್ಮೀಕಿಯನ್ನು ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂದು ಹೇಳಲಾಗುತ್ತದೆ. ರಾಮಾಯಣ ಸಂಸ್ಕೃತದ ಮೊದಲ ಮಹಾಕಾವ್ಯ. ವಾಲ್ಮೀಕಿ ಜಯಂತಿ ಆಚರಿಸುವ ಸಂಭ್ರಮದಲ್ಲಿ ನಾವು ಅವರ ಜೀವನ ಸಂದೇಶಗಳನ್ನು ಅಳವಡಿಸಿಕೊಂಡು ಉತ್ತಮ ಮಾರ್ಗ ಅನುಸರಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪದವಿ ಸೇರಿದಂತೆ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ನೀಡುವ ಮೂಲಕ ಸನ್ಮಾನಿಸಲಾಯಿತು. ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಬಿ.ಕೆ.ಭೀಮಪ್ಪ, ಜಿಲ್ಲಾ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ, ಜಿಪಂ ಉಪ ಕಾರ್ಯದರ್ಶಿ ಶಂಕರ್ ಕೊರವರ, ತಾಲೂಕು ತಹಸೀಲ್ದಾರ್ ರೇಷ್ಮಾ ಶೆಟ್ಟಿ, ವಾಲ್ಮೀಕಿ ಸಂಘದ ಉಪ ಕಾರ್ಯದರ್ಶಿ ಮಧುಕುಮಾರ್, ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ನಗರದ ತಾಲೂಕು ಕಚೇರಿಯಿಂದ ಕಲಾ ಮಂದಿರದವರೆಗೆ ನಡೆದ ಮೆರವಣಿಗೆ ಗಮನ ಸೆಳೆಯಿತು.

7 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪುಷ್ಪಾರ್ಚನೆ ಮಾಡಿದರು.