ಭವ್ಯ ಮೆರವಣಿಗೆಯೊಂದಿಗೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ವೃತ್ತಕ್ಕೆ ತರಲಾಗಿದೆ.

ಬಳ್ಳಾರಿ: ಭವ್ಯ ಮೆರವಣಿಗೆಯೊಂದಿಗೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ವೃತ್ತಕ್ಕೆ ತರಲಾಗಿದ್ದು, ಜ.3ರಂದು ಅದ್ಧೂರಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.

ಗುರುವಾರ ನಗರ- ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಸ್ವಾಗತ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಟ್ಟು 16 ಟನ್ ತೂಕದ ಮಹರ್ಷಿ ವಾಲ್ಮೀಕಿಯವರ ಈ ಪುತ್ಥಳಿಯ ನಿರ್ಮಾಣಕ್ಕೆ ₹1.18 ಕೋಟಿ ವೆಚ್ಚ ಖರ್ಚಾಗಿದೆ. ಇಡೀ ವೃತ್ತ ನಿರ್ಮಾಣಕ್ಕೆ ₹8.50 ಕೋಟಿ ಅನುದಾನ ವಿನಿಯೋಗ ಆಗಿದೆ. ಅಯೋಧ್ಯೆಯ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿರುವ ಕಲಾವಿದ ಅರುಣ್ ಯೋಗಿರಾಜ್ ಅವರೇ ಬಳ್ಳಾರಿಯ ಈ ವಾಲ್ಮೀಕಿಯವರ ಪುತ್ಥಳಿಯನ್ನು ಕೆತ್ತಿದ್ದು, ರಾಮಲಲ್ಲಾನ ಮೂರ್ತಿಗೆ ಬಳಸಲಾದ ಕಲ್ಲನ್ನೇ ಈ ಮೂರ್ತಿಗೆ ಬಳಸಲಾಗಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಅರುಣ್ ಯೋಗಿರಾಜ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ವಾಲ್ಮೀಕಿಯವರ ಪುತ್ಥಳಿ ಇಡೀ ದೇಶದಲ್ಲಿ ಇದೇ ಒಂದು ಎಂದು ತಿಳಿಸಿದರು.

ಜ.3ರಂದು ಅದ್ಧೂರಿಯಾಗಿ ಪುತ್ಥಳಿಯ ಅನಾವರಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಮಾಜಿ ಸಚಿವ ಶಾಸಕ ಬಿ.ನಾಗೇಂದ್ರ, ಶಾಸಕರಾದ ಜೆ.ಎನ್. ಗಣೇಶ್, ಬಿ.ಎಂ. ನಾಗರಾಜ ಹಾಗೂ ಎಸ್ಟಿ ಸಮುದಾಯದ ಹಲವು ಶಾಸಕರು ಭಾಗಿಯಾಗಲಿದ್ದಾರೆ, ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ ಎಂದರು.

ಪುತ್ಥಳಿಗೆ ಸ್ವಾಗತ:

ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ಸ್ವಾಗತಿಸಲು ವಾಲ್ಮೀಕಿ ನಾಯಕರ ಸಮಾಜದ ವತಿಯಿಂದ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾವಿರಾರು ಜನರು, ಮುಖಂಡರು ಭಾಗಿಯಾದರು. ಹಲವು ಗಣ್ಯರು ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. 1008 ಜನ ಕುಂಭ-ಕಳಶ ಹೊತ್ತ ಮಹಿಳೆಯರು, ವಿವಿಧ ಕಲಾ ವಾದ್ಯ ತಂಡಗಳೊಂದಿಗೆ ಜರುಗಿದ ಮೆರವಣಿಗೆಯು ಕಣ್ಣಿಗೆ ಹಬ್ಬದಂತಿತ್ತು. ಕೋಟೆ ಆಂಜನೇಯ ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ವಾಲ್ಮೀಕಿ ನಾಯಕರ ಸಮಾಜದ ಮುಖಂಡ, ಮಾಜಿ ಸಂಸದ ಸಣ್ಣಫಕ್ಕೀರಪ್ಪ, ಗುಮ್ಮನೂರು ಚಿನ್ನಾಯಪ್ಪ, ಕೆಇಬಿ ರುದ್ರಪ್ಪ, ವಕೀಲರಾದ ಜಯರಾಂ, ನಾಗರಾಜ, ರಾಂಪ್ರಸಾದ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ತಿಮ್ಮನಗೌಡ, ನಾಗಭೂಷಣಗೌಡ, ಮೇಯರ್ ಪಿ.ಗಾದೆಪ್ಪ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಜಶೇಖರ, ಕೆ.ಎಸ್. ಅಶೋಕ್, ನೂರ್ ಮೊಹಮ್ಮದ್, ಕುಬೇರ, ಆಸಿಫ್, ಪಿ.ಶಶಿಕಳಾ, ವೆಂಕಟೇಶ ಹೆಗಡೆ, ಮಹಮ್ಮದ್ ಭಾಯ್, ಪರಶುರಾಮುಡು, ದೇವಿನಗರ ಹೊನ್ನೂರಪ್ಪ, ಹಗರಿ ಗೋವಿಂದ, ಹಾವಂಭಾವಿ ಲೋಕೇಶ್, ಯರಗುಡಿ ಸೋಮಣ್ಣ, ಮುದಿಮಲ್ಲಯ್ಯ, ಕೆ.ಕೆ. ಹಾಳ್ ಸತ್ಯನಾರಾಯಣ, ಹುಲಿಯಪ್ಪ, ಪಿ.ಜಗನ್ನಾಥ, ಕೆ.ಎಸ್.ದಿವಾಕರ್, ವಿ.ಎನ್.ಶ್ರೀನಾಥ, ಲಾಲಸ್ವಾಮಿ, ಬಸರಕೋಡು ಗೋವಿಂದ, ಎಪಿಎಂಸಿ ರಾಮಣ್ಣ, ಸುಧಾಕರ್, ಭವಾನಿ ಪ್ರಸಾದ್, ಪದ್ಮಾ, ಮಂಜುಳಾ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.