ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರ ಸಮಿಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಹಾ ಶಿವರಾತ್ರಿ ಪ್ರಯುಕ್ತ 1999ರಿಂದ ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಭಾನುವಾರ ಮುಂಜಾನೆಯಿಂದ ಸಂಜೆವರೆಗೂ ಸ್ಥಳೀಯ ಭಕ್ತಾಧಿಗಳು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯಿಂದ ಆಗಮಿಸುತ್ತಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತುತ್ತಿದ್ದರು. ಹಾಸನ ಜಿಲ್ಲೆಯಿಂದ ಬರುತ್ತಿದ್ದ ಭಕ್ತರು ಶನಿವಾರಸಂತೆ-ಬೀಟಿಟೆಕಟ್ಟೆ ಮಾರ್ಗವಾಗಿ, ಮೈಸೂರು-ಕುಶಾಲನಗರ ಕಡೆಯಿಂದ ಆಗಮಿಸುತ್ತಿದ್ದ ಭಕ್ತರು ಬಾಣವಾರ-ಶನಿವಾರಸಂತೆ ಮಾರ್ಗವಾಗಿ ಮಾಲಂಬಿ ಗ್ರಾಮದ ಮೂಲಕ ಬೆಟ್ಟ ಹತ್ತುತ್ತಿದ್ದರು.

ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿಗೆ ಭಾನುವಾರ ಮುಂಜಾನೆ 4.30ರಿಂದ ತುಮಕೂರಿನ ಸುಕ್ಷೇತ್ರ ದೇವರಹೊಸಹಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಅಭಿಲಾಷ್ ಶಾಸ್ತ್ರಿ ನೇತೃತ್ವದಲ್ಲಿ ಅರ್ಚಕರ ತಂಡ ಮತ್ತು ಸ್ಥಳೀಯ ಅರ್ಚಕರು ದೇವಸ್ಥಾನದಲ್ಲಿ ಶ್ರೀ ಸ್ವಾಮಿಗೆ ಪುಷ್ಪಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿದಿ ವಿಧಾನಗಳನ್ನು ನೆರವೇರಿಸಿದರು.

ಬೆಳಗ್ಗೆ 9 ಗಂಟೆಗೆ ಮಹಾ ಮಂಗಳಾರತಿ ನಂತರ ಅರ್ಚಕರು ಭಕ್ತಾಧಿಗಳಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಬೆಟ್ಟದ ತುದಿಯಲ್ಲಿ ಭಕ್ತಾಧಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರು ಬೆಟ್ಟವನ್ನೇರಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಯುವಕರು, ಯುವತಿಯರು, ವಯಸ್ಕರು, ಕಿರಿಯರು, ಮಕ್ಕಳು ಉತ್ಸಾಹದಿಂದ ಬೆಟ್ಟವನ್ನೇರಿ ಸಂಭ್ರಮ ಪಟ್ಟರು. ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಪುಟ್ಟ ಜಾತ್ರೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದಾರಿ ಮಧ್ಯದಲ್ಲಿ ಭಕ್ತಾಧಿಗಳಿಗೆ ಕುಡಿಯಲು ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಯಿತು.

ಜಿಲ್ಲೆ, ಹೊರ ಜಿಲ್ಲೆಯ ಸುಮಾರು 8 ಸಾವಿರ ಭಕ್ತಾದಿಗಳು ಶ್ರೀ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹೇಳಿದರು. ಪೂಜಾ ಮಹೋತ್ಸವದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ದಾನಿಗಳು, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.