ಬಸವಣ್ಣನವರ ಚಿಂತನೆಗಳ ವಿಸ್ತೃತ ರೂಪವೇ ಮಹಾತ್ಮ ಗಾಂಧಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

| Published : Nov 30 2024, 12:49 AM IST

ಸಾರಾಂಶ

ಭಾರತೀಯ ಪರಂಪರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ನಿತ್ಯ ಸ್ಮರಣೀಯ ವ್ಯಕ್ತಿತ್ವಗಳು. 12ನೇ ಶತಮಾನದಲ್ಲಿ ಬಸವಣ್ಣ ತೋರಿಸಿದ ಸರ್ವ ಸಮಾನ ಸಮಾಜ ನಿರ್ಮಾಣದ ಕನಸಿನ ತಳಹದಿಯ ಮೇಲೆ ಗಾಂಧಿಯವರ ಚಿಂತನೆಗಳು ವಿಸ್ತೃತಗೊಂಡಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಾಯಕವೇ ಕೈಲಾಸ ಎಂದಿದ್ದ ಬಸವಣ್ಣನವರ ಚಿಂತನೆಗಳ ವಿಸ್ತೃತ ರೂಪವೇ ಮಹಾತ್ಮ ಗಾಂಧಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಗ್ರಾಮ ಭಾರತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಸಂಘ, ಕೆ.ಆರ್.ಪೇಟೆ ಉದಯ ರವಿ ಟ್ರಸ್ಟ್, ಅಕ್ಕಿಹೆಬ್ಬಾಳಿನ ಲೋಕಾಯನ ಕಲ್ಚರಲ್ ಟ್ರಸ್ಟ್, ತಾಲೂಕು ರೈತಸಂಘ, ತಾಲೂಕು ಪದವಿಪೂರ್ವ ಉಪನ್ಯಾಸಕ ಸಂಘ ಮತ್ತು ಗ್ರಾಮ ಭಾರತಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮಹಾತ್ಮ ಗಾಂಧಿಯವರ ಬದಕು- ಬರಹ ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ನಿತ್ಯ ಸ್ಮರಣೀಯ ವ್ಯಕ್ತಿತ್ವಗಳು. 12ನೇ ಶತಮಾನದಲ್ಲಿ ಬಸವಣ್ಣ ತೋರಿಸಿದ ಸರ್ವ ಸಮಾನ ಸಮಾಜ ನಿರ್ಮಾಣದ ಕನಸಿನ ತಳಹದಿಯ ಮೇಲೆ ಗಾಂಧಿಯವರ ಚಿಂತನೆಗಳು ವಿಸ್ತೃತಗೊಂಡಿವೆ ಎಂದರು.

ಗಾಂಧಿ ಸಮಾಜ ಸುಧಾರಕರಲ್ಲ. ಬದಲಾಗಿ ಹೃದಯಗಳನ್ನು ಸುಧಾರಿಸಲು ಪ್ರಯತ್ನಿಸಿದವರು. ಅಹಿಂಸೆ ಎನ್ನುವುದು ಗಾಂಧಿ ಮಾನವ ಜಗತ್ತಿಗೆ ನೀಡಿದ ಬಹುದೊಡ್ಡ ಹೋರಾಟದ ಅಸ್ತ್ರ. ಜಗತ್ತಿನ ಮೇಲೆ ಮಹಾತ್ಮ ಗಾಂಧಿ ಬೀರಿದ ಪ್ರಭಾವ ಅಸಾಮಾನ್ಯವಾದುದು ಎಂದು ತಿಳಿಸಿದರು.

ಭಾರತವನ್ನು ಸ್ವಾತ್ಯಂತ್ರದ ಕಡೆಗೆ ಕರೆದೊಯ್ಯುವಂತಹ ಅಹಿಂಸಾತ್ಮಕ ಹೋರಾಟದ ಪ್ರಯೋಗ ಭಾರತದಿಂದ ಬ್ರಿಟಿಷರನ್ನು ಓಡಿಸಿತಲ್ಲದೆ ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್ ಅವರಂತಹ ಭವಿಷ್ಯದ ನಾಯಕರಿಗೆ ಪ್ರೇರಣೆಯಾಯಿತು. ಜಗತ್ತಿನ ಉದ್ದಗಲಕ್ಕೂ ಸ್ವಾತ್ಯಂತ್ರ್ಯಕ್ಕಾಗಿ ನಡೆದ ಚಳುವಳಿಗಳಿಗೆ ಆದರ್ಶವಾಯಿತು. ಸತ್ಯಾಗ್ರಹ ಮತ್ತು ಅಹಿಂಸಾ ತತ್ವಗಳ ಪ್ರವರ್ತಕರಾಗಿದ್ದ ಗಾಂಧಿಯವರ ಜೀವನದಲ್ಲಿ ಜಗತ್ತಿನ ಶಾಂತಿಗೆ ಅಗತ್ಯವಾದ ಮದ್ದಿದೆ ಎಂದರು.

ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಧಮನಿತರ ಪರವಾಗಿ ಧ್ವನಿಯೆತ್ತಿದವರು. ಆದರೆ ಇಂದು ಮತಬ್ಯಾಂಕ್ ರಾಜಕಾರಣಕ್ಕಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸಲಾಗಿದೆ. ಹಣವುಳ್ಳವರ ಮತ್ತು ವಾಮಮಾರ್ಗದಲ್ಲಿ ಅಧಿಕಾರ ಪಡೆದವರನ್ನು ಯುವ ಸಮುದಾಯ ಹಿಂಬಾಲಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹಿಷ್ಣುತೆ, ಸಹಬಾಳ್ವೆ ಮತ್ತು ಸಮನ್ವಯ ಬದುಕಿನ ಪ್ರತೀಕವಾಗಿದ್ದ ಗಾಂಧಿಯ ಬಗೆಗೆ ಅಸಹನೆಯಿಂದ ಮಾತನಾಡುತ್ತಾ, ಹಿಂಸಾ ಪ್ರವೃತ್ತಿಯನ್ನು ಚಿಗುರೊಡಿಸುವ ಕೆಲಸ ಮಾಡಲಾಗುತ್ತಿದೆ. ಸಮಸ್ತ ವಿಶ್ವವೇ ಗಾಂಧಿ ಸ್ಮರಣೆ ಮಾಡುತ್ತಿದ್ದರೆ ಗಾಂಧಿ ಹುಟ್ಟಿದ ನಾಡಿನಲ್ಲಿ ಅವರ ಚಿಂತನೆಗಳನ್ನು ಅಪಮೌಲ್ಯಗೊಳಿಸುವ ಕೆಲಸ ನಡೆಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.

ಯುವ ಸಮುದಾಯದ ಬಳಿಗೆ ಗಾಂಧೀಜಿಯವರನ್ನು ತಲುಪಿಸುವ ಕೆಲಸ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ಗಾಂಧಿ ಕುರಿತ ವಿಚಾರ ಸಂಕಿರಣಗಳನ್ನು ನಡೆಸಿ ಗಾಂಧಿ ಕೃತಿಗಳನ್ನು ಓದಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೊಡೆ.ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಬೆಂಗಳೂರಿನ ಗಾಂಧಿ ಭವನದ ನಿದೇಶಕ ಪ್ರೊ.ಜಿ.ಬಿ.ಶಿವರಾಜು ಉಪಸ್ಥಿತರಿದ್ದರು.

ಅನಂತರ ನಡೆದ ವಿಚಾರ ಗೋಷ್ಠಿಗಳಲ್ಲಿ ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರು, ಗಾಂದೀಜಿ ಮತ್ತು ಅಂಬೇಡ್ಕರ್ ನಡುವಿನ ಅಂದಿನ ಭಿನ್ನಾಭಿಪ್ರಾಯಗಳನ್ನು ಅರ್ಥೈಸಿಕೊಳ್ಳುವುದರ ಬಗ್ಗೆ ಮಾತನಾಡಿದರು. ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಹಾಗೂ ವ್ಯಕ್ತಿಗಳನ್ನು ಕುರಿತು ಬಸರಾಳು ಸ.ಪ.ಪೂ ಕಾಲೇಜಿನ ಉಪನ್ಯಾಸಕ ಲೋಕೇಶ್ ಬೆಕ್ಕಳಲೆ, ಮಂಡ್ಯ ಜಿಲ್ಲೆಯಲ್ಲಿ ಗಾಂಧೀಜಿಯವರ ಹೆಜ್ಜೆಗಳನ್ನು ಕುರಿತು ಮಂಡ್ಯ ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಶಿವರಾಮು, ಗ್ರಾಮೀಣ ಯುವಜನತೆ ಮತ್ತು ಸ್ವಾವಲಂಬನೆ ಕುರಿತು ಮೇಲುಕೋಟೆಯ ಡಾ.ಸುಮನಸ್ ಕೌಲಗಿ ವಿಚಾರ ಮಂಡಿಸಿದರು.

ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ವಿ.ಜಗದೀಶ್, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ವಿಚಾರ ಗೋಷ್ಠಿಗಳಲ್ಲಿ ಉಪಸ್ಥಿತರಿದ್ದರು.