ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಸತ್ಯ, ಶಾಂತಿ, ಅಹಿಂಸೆಯ ಹರಿಕಾರ, ದೇಶದ ಜನರಿಂದ ಬಾಪೂಜಿ ಎಂದೇ ಕರೆಯಲ್ಪಟ್ಟ ಮಹಾತ್ಮ ಗಾಂಧೀಜಿಯವರ ಜೀವನವೇ ಒಂದು ಸಂದೇಶವಾಗಿದ್ದು, ಅವರ ಹೆಸರು ಭಾರತೀಯರ ಮನಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಭಾರತಕ್ಕೆ ಸ್ವಾತಂತ್ರ್ಯದೊರಕಿಸಿಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ದಿನದಂದು ದೇಶದ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಎಸ್.ಆರ್.ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ I & II, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಎನ್ಸಿಸಿ ಸಂಯುಕ್ತಾಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಮತ್ತು ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿಯವರು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಮನೆ ಮಾತಾದರು. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾದಲ್ಲಿಯೂ ಅನೇಕ ಕಡೆ ಗಾಂಧೀಜಿಯವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ ಎಂದರು. ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದ ಅನೇಕ ಶಾಂತಿಯುತ ಹೋರಾಟಗಳ ಮೂಲಕ ಬ್ರಿಟಿಷರ ವಿರುದ್ಧ ದೇಶದ ಜನರನ್ನು ಸಂಘಟಿಸಿದವರು ಮಹಾತ್ಮ ಗಾಂಧೀಜಿ. ಸತ್ಯ, ಅಹಿಂಸೆಗಳ ನಂದಾದೀಪದ ಬೆಳಕಿನಲ್ಲಿ ಸತ್ಯಾಗ್ರಹದ ದಾರಿಯಲ್ಲಿ ನಡೆದು ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಸ್ವಚ್ಛತೆ, ಸ್ವಾವಲಂಬಿತ್ವಗಳ ಪ್ರತಿಪಾದಕರಾಗಿದ್ದ ಅವರ ಕನಸನ್ನು ನನಸು ಮಾಡುವ ಸಂಕಲ್ಪ ಮಾಡೋಣ ಎಂದರು. ಗಾಂಧೀಜಿ ಜತೆಗೆ ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹುಟ್ಟಿದ ದಿನವೂ ಹೌದು, ಸತ್ಯ ಮತ್ತು ಅಹಿಂಸಾತ್ಮಕ ಹೋರಾಟದ ಮೂಲಕ ಜಗಕೆ ಹೊಸ ಬೆಳಕು ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರಳ ವ್ಯಕ್ತಿತ್ವ, ದೃಢ ನಿರ್ಧಾರದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಈ ಮಹಾ ಪುರುಷರ ಬದುಕಿನ ತತ್ವ, ಆದರ್ಶಗಳು ಹಾಗೂ ಮಾದರಿ ಬದುಕು ಸರ್ವಕಾಲಕ್ಕೂ ಅನುಕರಣೀಯ ಅವರ ಹುಟ್ಟುಹಬ್ಬದ ದಿನವಾದ ಇಂದು ಅವರನ್ನು ವಿನಮ್ರವಾಗಿ ನಾವೆಲ್ಲರೂ ಸ್ಮರಿಸಿಕೊಳ್ಳೋಣ. ಈ ಉಬಯ ಮಹಾಚೇತನಗಳ ಸಾಮಾಜಿಕ ಬದ್ಧತೆ, ಜೀವನ ಮತ್ತು ಮಾದರಿ ವ್ಯಕ್ತಿತ್ವ ನಮ್ಮೆಲ್ಲರಿಗೂ ಸ್ಫೂರ್ತಿರ್ಯ ಸೆಲೆ, ಅವರ ಸತ್ಯದ ಹಾದಿ ಮತ್ತು ಪ್ರಾಮಾಣಿಕತೆ ನಮ್ಮೆಲ್ಲರಿಗೂ ದೀವಿಗೆಯಾಗಲಿ ಎಂದರು. ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್.ಎಸ್.ಬಿರಾದಾರ, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಲೋಕೇಶ ರಾಠೋಡ, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಧಿಕಾರಿ ಡಾ.ಎಂ.ಕೆ.ಗವಿಮಠ, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಲೆಪ್ಟಿನೆಂಟ್ ಅಧಿಕಾರಿ ಪ್ರೊ.ಎಸ್.ಬಿ.ಮೇಟಿ ಹಾಗೂ ದೈಹಿಕ ನಿರ್ದೇಶಕ ಅನಿಲ ಮುನ್ನೊಳ್ಳಿ ಇದ್ದರು.
ಡಾ.ಲೋಕೇಶ ರಾಠೋಡ ಸ್ವಾಗತಿಸಿದರು. ಡಾ.ಎಂ.ಕೆ.ಗವಿಮಠ ವಂದಿಸಿದರು. ಗಜಾನನ ಮಾಳಿ ನಿರೂಪಿಸಿದರು.