ಕನ್ನಡಪ್ರಭ ವಾರ್ತೆ ಹುಕ್ಕೇರಿಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕ-ಸದಸ್ಯರ ಜೀವಾಳ ಎನಿಸಿರುವ ಹುಕ್ಕೇರಿಯ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿ ಪಥದತ್ತ ಸಾಗಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ ₹ 4.01 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕ-ಸದಸ್ಯರ ಜೀವಾಳ ಎನಿಸಿರುವ ಹುಕ್ಕೇರಿಯ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿ ಪಥದತ್ತ ಸಾಗಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ ₹ 4.01 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಬಡ, ಮಧ್ಯಮ ವರ್ಗದ ಜನರು, ಕೂಲಿಕಾರರು, ಬೀದಿ ಬದಿ ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರ ಆರ್ಥಿಕ ಮಟ್ಟ ಸುಧಾರಣೆಯ ಸದುದ್ದೇಶದಿಂದ ಆರಂಭವಾದ ಪ್ರತಿಷ್ಠಿತ ಈ ಸಂಸ್ಥೆಯು ತನ್ನ ಎರಡೂವರೆ ದಶಕಗಳ ಸುದೀರ್ಘ ಪಯಣವನ್ನು ಯಶಸ್ವಿಯಾಗಿ ಪೂರೈಸಿ ಪ್ರಗತಿಯತ್ತ ಸಾಗಿದೆ ಎಂದರು.

ಬ್ಯಾಂಕ್ ಒಟ್ಟು 14259 ಜನ ಸದಸ್ಯರನ್ನು ಹೊಂದಿದ್ದು, ಒಟ್ಟು ₹ 1332 ಕೋಟಿ 14 ಲಕ್ಷ ವಹಿವಾಟು ನಡೆಸಿದೆ. ₹ 43 ಲಕ್ಷ ಶೇರು ಬಂಡವಾಳವಿದ್ದು, ₹ 11.66 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿವೆ. ₹ 342 ಕೋಟಿ ದುಡಿಯುವ ಬಂಡವಾಳವಿದ್ದು, 257.14 ಕೋಟಿ ಸಾಲ ವಿತರಿಸಲಾಗಿದೆ. ₹ 311.94 ಕೋಟಿ ಠೇವುಗಳಿವೆ. ₹ 48.85 ಕೋಟಿ ಹೂಡಿಕೆಗಳಿವೆ. ಇದರೊಂದಿಗೆ ಮಾರ್ಚ್ ಅಂತ್ಯದವರೆಗೆ ₹ 4.01 ಕೋಟಿ ನಿವ್ಹಳ ಲಾಭ ಗಳಿಸಿದೆ ಎಂದು ಮಾಹಿತಿಯನ್ನು ವಿವರಿಸಿದರು.ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಉತ್ತರ ಕನ್ನಡ (ಕಾರವಾರ), ಶಿವಮೊಗ್ಗ ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದೆ. ಈಗಾಗಲೇ ಪ್ರಧಾನ ಕಚೇರಿ ಸೇರಿ ಒಟ್ಟು 17 ಶಾಖೆಗಳಿವೆ. ಈ ಭಾಗದ ಯುವ ಸಮುದಾಯಕ್ಕೆ ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್‌ನ ಸಿಆರ್‌ಎಫ್ ನಿಧಿಯಡಿ ಡಿಜಿಟಲ್ ಲೈಬ್ರರಿ ಆರಂಭಿಸುವ ಚಿಂತನೆಯಿದೆ. ಗ್ರಾಹಕ- ಸದಸ್ಯರ ಸಹಕಾರ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ ಎಂದರು.

ಗ್ರಾಹಕರೇ ಬ್ಯಾಂಕ್‌ನ ಆಧಾರ ಸ್ತಂಭವಾಗಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕ-ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಬ್ಯಾಂಕಿಂಗ್ ಸೇವೆ ಒದಗಿಸಲಾಗುತ್ತಿದೆ. ವಾಣಿಜ್ಯ ಚಟುವಟಿಕೆಯೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ. ವಿವಿಧ ಸಾಲಗಳಿಗೆ ಕಡಿಮೆ ಬಡ್ಡಿ ದರ ಆಕರಣೆ, ಠೇವುದಾರರಿಗೆ ಆಕರ್ಷಕ ಬಡ್ಡಿ ದರ ನೀಡಲಾಗುತ್ತಿದೆ. ಹಿರಿಯ ನಾಗರಿಕರು, ಸೈನಿಕರು ಮತ್ತು ವಿಧವೆಯರಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ನಿರ್ದೇಶಕರಾದ ಅಕ್ಕಪ್ಪಾ ಖತಗಲ್ಲಿ, ಅಶೋಕ ಪಾಟೀಲ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಸುಕುಮಾರ ಖತಗಲ್ಲಿ, ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ವ್ಯವಸ್ಥಾಪಕ ಸಂತೋಷಸಿಂಗ್ ರಜಪೂತ, ಪ್ರವೀಣ ಪಾಟೀಲ, ಪ್ರಕಾಶ ಗಜಬರ ಮತ್ತಿತರರು ಉಪಸ್ಥಿತರಿದ್ದರು.