ಸಾರಾಂಶ
ಕಾರ್ಕಳ: ಜಾತ್ಯತೀತ ನಿಲುವಿನೊಂದಿಗೆ ರಾಜಕೀಯ ಪ್ರವೇಶಿಸಿದ ಮಹಾವೀರ ಹೆಗ್ಡೆ, ಇಂದು ತನ್ನ ಸ್ವಂತ ಲಾಭಕ್ಕಾಗಿ ಹಿಂದುತ್ವ ಜಪ ಮಾಡುತ್ತಿದ್ದಾರೆ ಎಂದು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಮೇಶ್ ಬಜಕಳ ತಿಳಿಸಿದ್ದಾರೆ.ಅಷ್ಟೇ ಅಲ್ಲದೆ ತಮ್ಮ ಸರ್ಕಾರದ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಂದ ಕಪ್ಪು ಹಣದಿಂದ ಕಾರ್ಕಳ ನಗರದಲ್ಲಿ ಕಾನೂನು ಬಾಹಿರ ಬಹುಮಡಿಯ ಕಟ್ಟಡ ನಿರ್ಮಾಣ ಮೂಲಕ ಅಕ್ರಮ ಆಸ್ತಿ ಸಂಪಾದಿಸುತ್ತಿರುವ ಮಹಾವೀರ ಹೆಗ್ಡೆಯವರಿಂದ ಉದಯ ಕುಮಾರ್ ಶೆಟ್ಟಿ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮಹಾವೀರ ಹೆಗ್ಡೆಯವರ ಬೇನಾಮಿ ಆಸ್ತಿಗಳ ದಾಖಲೆ ಸಂಗ್ರಹಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ಮುಂದಿನ ದಿನಗಳಲ್ಲಿ ದೂರು ನೀಡಲು ಸಿದ್ಧತೆ ಪಡಿಸುತ್ತಿದ್ದೇವೆ. ನಕಲಿ ಮೂರ್ತಿ ನಿರ್ಮಾಣ ಮಾಡಿ, ನ್ಯಾಯಾಲಯದಲ್ಲಿ ನ್ಯಾಯಾಧೀಶರಿಂದ ಛೀಮಾರಿ ಹಾಕಿಸಿಕೊಂಡು ನಕಲಿ ಮೂರ್ತಿ ನಿರ್ಮಾಣದ ಮೂಲಕ ಕಲಾವಿದರ ಹೆಸರಿಗೆ ಮಸಿ ಬಳಿದ ಕೃಷ್ಣ ನಾಯ್ಕ್ ಅವರ ಪರ ನಿಂತು ಸಮರ್ಥಿಸಿ ಕೊಂಡಾಗ ಈ ಅವ್ಯವಹಾರದಲ್ಲಿ ಶಾಸಕರ ಜೊತೆ ಮಹಾವೀರ ಹೆಗ್ಡೆ ಅವರು ಪಾಲು ಪಡೆದಿರುವಂತಿದೆ.ಒಬ್ಬ ಕಳ್ಳನ ಪರವಾಗಿ ಬಂದು ಬ್ಯಾಟ್ ಬೀಸುತ್ತಿರುವ ಬಿಜೆಪಿಗರು ಎಂಥವರು ಎಂದು ನಾವು ಪ್ರಶ್ನಿಸ ಬೇಕಾಗಿದೆ. ನಕಲಿ ಪರಶುರಾಮನ ವಿಗ್ರಹ ನಿರ್ಮಿಸಿದ ಕೃಷ್ಣನಾಯ್ಕ ಅವರನ್ನು ಸಮರ್ಥಿಸುವುದು ಕಂಡಾಗ ಅತನ ಜೊತೆ ಉಳಿದವರು ಪಾಲು ಪಡೆದುಕೊಂಡಿರುವುದಾಗಿ ಇದೀಗ ಸಾಬೀತಾಗುತ್ತಿದೆ.ಅದರಲ್ಲಿ ಒಂದು ಪಾಲು ಮಹಾವೀರ ಹೆಗ್ಡೆ ಪಡೆದುಕೊಂಡಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ತಾವು ಮಾಡಿದ ತಪ್ಪುಗಳನ್ನು ಇನ್ನಾದರೂ ಒಳ್ಳೆಯ ಮನಸ್ಸಿನಿಂದ ಒಪ್ಪಿಕೊಂಡು ಸಮಸ್ತ ಜನತೆಯ ಮುಂದೆ ಕ್ಷಮೆ ಕೇಳಿ ಎಂದು ರಮೇಶ್ ಬಜಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.