ಮಣಿಪಾಲ: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಸಿಐ) ಪ್ರತಿಷ್ಠಿತ ಉದ್ದಿಮೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಾತ್ರವಾಗಿದೆ. ನವದೆಹಲಿಯಲ್ಲಿ ಡಿ. 5 ರಂದು ನಡೆದ ಸಿಸಿಐ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಶೃಂಗಸಭೆಯಲ್ಲಿ, ಮಾಹೆ ಸಂಸ್ಶೆಯ ಕಾರ್ಪೋರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಅವರು ವಿಶ್ವವಿದ್ಯಾಲಯದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಮಾಹೆಗೆ ಒಲಿದಿರುವ ಈ ಪ್ರತಿಷ್ಠಿತ ಪ್ರಶಸ್ತಿಯ ಕುರಿತು ಮಾಹೆ ಉಪಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್ ಅವರು, ಈ ಪ್ರತಿಷ್ಠಿತ ಮನ್ನಣೆಯನ್ನು ಪಡೆದಿರುವುದು ನಮಗೆ ಅತ್ಯಂತ ಗೌರವ ತಂದಿದೆ. ಮಾಹೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ಪಾಲುದಾರರು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಜ್ಞಾನ ಮತ್ತು ನವೀನತೆಯ ಗಡಿಗಳನ್ನು ನಿರಂತರವಾಗಿ ವಿಸ್ತರಿಸುತ್ತಿದ್ದಾರೆ. ಈ ಬದ್ಧತೆಗಾಗಿನೀಡಲಾಗಿರುವ ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಸಮಾಜದ ಧನಾತ್ಮಕ ಪರಿವರ್ತನೆಯ ಆಶಾದಾಯಕ ಕೊಡುಗೆ ನೀಡಲಿದೆ ಎಂದಿದ್ದಾರೆ.

ಮಾಹೆ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್., ವಾಸ್ತವ ಪ್ರಪಂಚದ ಸವಾಲುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯುವ ಪ್ರಯತ್ನಕ್ಕೆ ಸಂದ ಪ್ರಶಸ್ತಿ ಇದಾಗಿದೆ. ರಾಷ್ಟ್ರೀಯ ಪ್ರಗತಿಗಾಗಿ ಸಂಶೋಧನೆ, ನಾವೀನ್ಯತೆ ಮತ್ತು ಪ್ರತಿಭೆಗಳ ಅಭಿವೃದ್ಧಿಗಾಗಿ ವೇಗವರ್ಧಕ ಪಾಲುದಾರಿಕೆಗಳನ್ನು ಬೆಳೆಸಲು ಮಾಹೆ ಬದ್ಧವಾಗಿದೆ ಎಂದು ಹೇಳಿದ್ದಾರೆ.