ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಚುನಾವಣಾ ಗೌಪ್ಯತೆ ಕಾಪಾಡಿ: ಡಿಸಿ ಗಂಗೂಬಾಯಿ

| Published : Apr 22 2024, 02:17 AM IST

ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಚುನಾವಣಾ ಗೌಪ್ಯತೆ ಕಾಪಾಡಿ: ಡಿಸಿ ಗಂಗೂಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಲು 12ಡಿ ನಮೂನೆ ಒಪ್ಪಿಗೆ ಪತ್ರ ನೀಡಿದ 85 ವರ್ಷ ಮೇಲ್ಪಟ್ಟ 3046 ಹಾಗೂ ಅಂಗವಿಕಲ 1977 ಮತದಾರರ ಯಾವುದೇ ಮತವು ತಿರಸ್ಕೃತವಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡಿಸಬೇಕು ಎಂದು ಡಿಸಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು.

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏ. 25ರಿಂದ 30ರ ವರೆಗೆ ಮನೆಯಿಂದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮತದಾನ ಪ್ರಕ್ರಿಯಲ್ಲಿ ಯಾವುದೇ ರೀತಿಯ ಲೋಪದೋಷವಾಗದಂತೆ ಚುನಾವಣಾ ಗೌಪ್ಯತೆ ಕಾಪಾಡಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿಯೋಜಿತ ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತದಾನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿಯ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಲು 12ಡಿ ನಮೂನೆ ಒಪ್ಪಿಗೆ ಪತ್ರ ನೀಡಿದ 85 ವರ್ಷ ಮೇಲ್ಪಟ್ಟ 3046 ಹಾಗೂ ಅಂಗವಿಕಲ 1977 ಮತದಾರರ ಯಾವುದೇ ಮತವು ತಿರಸ್ಕೃತವಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.

ಮತದಾನ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ನಮೂನೆ 13ಎ ಮತ್ತು 13ಬಿ(ಚಿಕ್ಕ ಲಕೋಟೆ) ಎರಡರ ಮೇಲೂ ಅಂಚೆ ಮತಪತ್ರದ ಕ್ರಮ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇಲ್ಲವಾದಲ್ಲಿ ಅಂತಹ ಮತಗಳು ತಿರಸ್ಕರಿಸಲ್ಪಡುತ್ತದೆ. ಮನೆಯಿಂದ ಮತದಾನ ಪ್ರಕ್ರಿಯೆಗೆ ನಿಯೋಜನೆಗೊಂಡ ಸಿಬ್ಬಂದಿ ಕಡ್ಡಾಯವಾಗಿ ತಮಗೆ ನೀಡಿದ ವಾಹನದಲ್ಲಿ ಪ್ರಯಾಣಿಸಬೇಕು. ಯಾವುದೇ ಬದಲಿ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ರೂಟ್ ಮ್ಯಾಪ್ ಮಾಡಿಕೊಂಡು, ಮತದಾರರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಮತದಾರರ ಹಾಜರಿ ಖಾತರಿಪಡಿಸಿಕೊಂಡು ಮತದಾನ ಪ್ರಕ್ರಿಯೆಗೆ ಬೇಕಾದ ದಾಖಲೆಗಳು ಮತ್ತು ಸಾಮಗ್ರಿಗಳನ್ನು ತೆಗೆದುಕೊಂಡು ತೆರಳಬೇಕು ಎಂದರು.

ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ್ ತರಬೇತಿ ನೀಡಿ, ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು, ಮೈಕ್ರೋ ಆಬ್ಸರ್ವರ್, ಬಿಎಲ್ಒ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡ ತಂಡವು ಹಿರಿಯ ನಾಗರಿಕರು ಮತ್ತು ಅಂಗವಿಕಲರ ಮತದಾರರ ಪಟ್ಟಿ, ಸಾಕಷ್ಟು ಸಂಖ್ಯೆಯ ಅಂಚೆ ಮತಪತ್ರಗಳು ಸೇರಿದಂತೆ ಅಗತ್ಯ ಲೇಖನ ಸಾಮಗ್ರಿಗಳು ತೆಗೆದುಕೊಂಡು ತೆರಳಬೇಕು ಎಂದರು.

ಮತದಾರರಿಗೆ ಅಧಿಕಾರಿಗಳು ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಅಂಚೆ ಮೂಲಕ ಅಥವಾ ಮೊಬೈಲ್ ಸಂದೇಶ ಕಳುಹಿಸಬೇಕು. ನಿಯೋಜಿಸಲಾದ ತಂಡವು ಮೊದಲ ಸಲ ಮತದಾರನ ಮನೆಗೆ ಭೇಟಿ ನೀಡಿದಾಗ ಮತದಾರನು ಲಭ್ಯವಿಲ್ಲದಿದ್ದಲ್ಲಿ ಎರಡನೇ ಸಲ ಭೇಟಿ ನೀಡಬೇಕು. ಅಂಚೆ ಮತಪತ್ರದ ಮೂಲಕ ಮತದಾನ ಮಾಡುವ ಸಂಬಂಧ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಮತದಾರನಿಗೆ ಸಂಕ್ಷಿಪ್ತ ವಿವರಣೆ ನೀಡಬೇಕು. ಮತದಾರನ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ ಎಚ್ಚರ ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮನೆಯಿಂದ ಮತದಾನಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಇದ್ದರು.