ಕನ್ನಡಪ್ರಭ ವಾರ್ತೆ ನಾಗಮಂಗಲ

ಮನುಷ್ಯನ ಉತ್ತಮ ಆರೋಗ್ಯಕ್ಕಾಗಿ ಮೊದಲು ತಮ್ಮ ಸುತ್ತ ಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ವಿಶ್ವಪರಿಸರ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಗಿಡ ಮರಗಳಿಂದ ನಾವು ಎಲ್ಲ ರೀತಿಯಲ್ಲೂ ಉಪಯೋಗವನ್ನು ಪಡೆದುಕೊಳ್ಳುವಂತೆ ಕಡಿದ ಮರದ ಬದಲಿಗೆ ಮತ್ತೊಂದು ಸಸಿ ನಡೆವುದನ್ನು ಮರೆಯಬಾರದು ಎಂದರು.

ಪರಿಸರ ಸಂರಕ್ಷಣೆ ವೈಯಕ್ತಿಕ ಸ್ವಚ್ಛತೆಯಿಂದ ಮೊದಲಾಗಬೇಕು. ನಂತರ ಸ್ವಚ್ಛತೆಯ ಪರಿಕಲ್ಪನೆಯನ್ನು ಸಮುದಾಯಕ್ಕೂ ಕೊಂಡೊಯ್ಯಬೇಕು. ಒಂದು ಮರವನ್ನು ಕಡಿದ ಸ್ಥಳದಲ್ಲಿ ಎರಡು ಸಸಿಗಳನ್ನು ನೆಡುವುದನ್ನು ಅಭ್ಯಾಸ ಮಾಡಿಕೊಂಡಲ್ಲಿ ಪರಿಸರವನ್ನು ಶಾಶ್ವತವಾಗಿ ಮುಂದಿನ ಪೀಳಿಗೆಗೆ ಉಳಿಸಿಹೋಗಬಹುದು ಎಂದರು.

ಇಂದು ನೆಟ್ಟಿರುವ ಗಿಡಗಳನ್ನು ತಮ್ಮ ಮಕ್ಕಳಂತೆ ಪೋಷಣೆಮಾಡಿ ಬೆಳೆಸಿದರೆ, ಮುಂದೆ ಅವುಗಳು ಬೆಳೆದು ಮನುಷ್ಯ ಮತ್ತು ಪ್ರಾಣಿ ಸಂಕುಲಕ್ಕೆ ಉತ್ತಮ ಆಮ್ಲಜನಕ ನೀಡುವ ಜೊತೆಗೆ ಹಣ್ಣುಗಳನ್ನು ಉಚಿತವಾಗಿ ಕೊಡುತ್ತವೆ ಎಂದು ಹೇಳಿದರು.


ಪ್ರಕೃತಿಯನ್ನು ನಾವು ಸಂರಕ್ಷಣೆ ಮಾಡಿ ಮುಂದುವರಿಸಿದರೆ ನಮ್ಮ ಮುಂದಿನ ಪೀಳಿಗೆ ಇಂತಹ ಸೌಂದರ್ಯ ಹೊಂದಿರುವ ವಾತಾವರಣ ನೋಡಲು ಸಾಧ್ಯವಾಗುತ್ತದೆ. ಪ್ರಕೃತಿ ಸುರಕ್ಷಿತವಾಗಿದ್ದರೆ ನಾವೂ ಕೂಡ ಸುರಕ್ಷಿತವಾಗಿರುತ್ತೇವೆ. ಹಾಗಾಗಿ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಗಿಡಮರಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್, ಆಸ್ಪತ್ರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಧರ್ಮೇಂದ್ರ, ಆಡಳಿತಾಧಿಕಾರಿ ಸಿ.ಎನ್. ಚಂದನ್‌ಕುಮಾರ್ ಸೇರಿದಂತೆ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ಎನ್‌ಎಸ್‌ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳು ಇದ್ದರು.

ಪ್ರಕೃತಿ ರಕ್ಷಿಸಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ: ಚಿಕ್ಕ ಬೋರಯ್ಯ

ದೇವಲಾಪುರ:ಪ್ರಕೃತಿಯನ್ನು ಹಾಳು ಮಾಡದೇ ನಿರಂತರ ಸಂರಕ್ಷಣೆ ಮಾಡಿಕೊಂಡು ಬಂದರೆ ಪ್ರಕೃತಿಯು ಸದಾ ನಮ್ಮನ್ನು ಕಾಪಾಡುತ್ತ ಸಂಜೀವಿನಿಯಂತೆ ಇರುತ್ತದೆ ಎಂದು ಮುಖ್ಯ ಶಿಕ್ಷಕ ಚಿಕ್ಕಬೋರಯ್ಯ ತಿಳಿಸಿದರು.

ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಗಳ ಅತಿ ಆಸೆಗೆ ಕಾಡು, ಪ್ರಕೃತಿ ನಾಶವಾಗುತ್ತಿ, ಈ ಪರಿಸ್ಥಿತಿಯಲ್ಲಿ ಮುಂದಿನ ಯುವ ಜನಾಂಗಕ್ಕೆ ಪರಿಸರದಿಂದ ದೊರೆಯುವ ಸೌಲಭ್ಯಗಳು ಕಷ್ಟವಾಗುತ್ತದೆ. ಭೂಮಿ ಸುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನು ಸಂರಕ್ಷಿಸಿದರೆ ನಮ್ಮ ಆರೋಗ್ಯ ಸುಧಾರಣೆಯಾಗುತ್ತದೆ. ಪರಿಸರ ನಮ್ಮನ್ನು ನಿತ್ಯವೂ ಕಾಪಾಡಲು ಸಾಧ್ಯ ಎಂದರು.ಗ್ರಾಪಂನಿಂದ ಮಕ್ಕಳ ಹಕ್ಕುಗಳ ವಿಶೇಷ ಸಭೆ ನಡೆಸಲಾಯಿತು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಗೌಡ, ಪಂಚಾಯ್ತಿ ಸಿಬ್ಬಂದಿ ವರ್ಗ ಹಾಜರಿದ್ದರು. ಅತಿಥಿಗಳಾಗಿ ನಾಗಮಂಗಲ ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅಕ್ಷರ ದಾಸೋಹ ಮಂಜುನಾಥ್ ಇದ್ದರು.