ಮಕರ ಸಂಕ್ರಮಣ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿಕ್ಕರಥೋತ್ಸವ

| Published : Jan 16 2025, 12:48 AM IST

ಸಾರಾಂಶ

ಮಂಗಳವಾರ ರಾತ್ರಿ ಕುಕ್ಕೆಲಿಂಗ ದೇವರ ಜಾತ್ರೋತ್ಸವದ ಪ್ರಯುಕ್ತ ದೇವರ ಉತ್ಸವಾದಿಗಳು ಹೊರಾಂಗಣದಲ್ಲಿ ನೆರವೇರಿತು. ಈ ಸಂದರ್ಭ ಕಾಚುಕುಜುಂಬ ದೈವದ ನಡಾವಳಿ ನಡೆಯಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಕರ ಸಂಕ್ರಮಣದಂದು ನಡೆಯುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕುಕ್ಕೆಲಿಂಗ ಜಾತ್ರೋತ್ಸವದ ಪ್ರಯುಕ್ತ ಬುಧವಾರ ಬೆಳಗ್ಗೆ ವೈಭವದ ಚಿಕ್ಕರಥೋತ್ಸವ ಜರುಗಿತು. ದೇವಳದ ಅರ್ಚಕ ವೇದಮೂರ್ತಿ ರಾಜೇಶ್ ನಡ್ಯಂತ್ತಿಲ್ಲಾಯ ಉತ್ಸವದ ವಿದಿವಿಧಾನ ನೆರವೇರಿಸಿದರು.

ಮುಂಜಾನೆ ರಥಬೀದಿಗೆ ಆಗಮಿಸಿದ ದೇವರು ಚಿಕ್ಕರಥದಲ್ಲಿ ಆರೂಢರಾದರು. ದೇವರಿಗೆ ಅರ್ಚಕರು ಪೂಜೆ ನೆರವೇರಿಸಿದರು. ನಂತರ ರಥೋತ್ಸವವವು ರಥಬೀದಿ ವೃತ್ತದ ತನಕ ನಡೆಯಿತು. ದೇವರು ಪಾಲಕಿಯಲ್ಲಿ ಸವಾರಿ ಮಂಟಪಕ್ಕೆ ತೆರಳಿದರು. ಸವಾರಿ ಮಂಟಪದ ಸಂಕ್ರಮಣ ಕಟ್ಟೆಯಲ್ಲಿ ದೇವರ ಕಟ್ಟೆಪೂಜೆ ನೆರವೇರಿತು. ರಥೋತ್ಸವದ ಸಂದರ್ಭದಲ್ಲಿ ಕ್ಷೇತ್ರ ರಕ್ಷಕಿ ಹೊಸಳಿಗಮ್ಮ ದೈವವು ಶ್ರೀ ದೇವರ ದರುಶನ ಪಡೆದು ನರ್ತನ ಸೇವೆ ನೆರವೇರಿಸಿತು. ನಿವಾಳಿ ಸಮರ್ಪಣೆ: ರಥೋತ್ಸವ ಪೂರೈಸಿ ಆಗಮಿಸಿದ ಶ್ರೀ ದೇವರಿಗೆ ಗೋಪುರದ ಬಳಿ ನಿವಾಳಿ ಸಮರ್ಪಿಸಲಾಯಿತು. ನಂತರ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನ ಕುಕ್ಕೆಸುಬ್ರಹ್ಮಣ್ಯನಿಗೆ ಪೂಜೆ ನೆರವೇರಿತು. ದಿನದ ವಿಶೇಷವಾಗಿ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯರ ನೇತೃತ್ವದಲ್ಲಿ ವಿಶೇಷ ೧೦೮ ಕಾಯಿ ಗಣಪತಿ ಹೋಮ ಒಳಾಂಗಣದಲ್ಲಿ ನೆರವೇರಿತು.

ಮಂಗಳವಾರ ರಾತ್ರಿ ಕುಕ್ಕೆಲಿಂಗ ದೇವರ ಜಾತ್ರೋತ್ಸವದ ಪ್ರಯುಕ್ತ ದೇವರ ಉತ್ಸವಾದಿಗಳು ಹೊರಾಂಗಣದಲ್ಲಿ ನೆರವೇರಿತು. ಈ ಸಂದರ್ಭ ಕಾಚುಕುಜುಂಬ ದೈವದ ನಡಾವಳಿ ನಡೆಯಿತು. ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್. ಹಾಗೂ ಭಕ್ತರು ಉಪಸ್ಥಿತರಿದ್ದರು.