ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸುವ ಮೂಲ ಉದ್ದೇಶ ಗಮನದಲ್ಲಿಟ್ಟುಕೊಂಡು ಸರ್ಕಾರ ಆಯೋಜಿದ ಪ್ರಜಾಸೇವಾ ಆಂದೋಲನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಡೇಕಲ್

ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸುವ ಮೂಲ ಉದ್ದೇಶ ಗಮನದಲ್ಲಿಟ್ಟುಕೊಂಡು ಸರ್ಕಾರ ಆಯೋಜಿದ ಪ್ರಜಾಸೇವಾ ಆಂದೋಲನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.

ಕೊಡೇಕಲ್ ಸಮೀಪದ ರಾಜನಕೋಳೂರ ಗ್ರಾಮದಲ್ಲಿ ಜರುಗಿದ ಕೊಡೇಕಲ್ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವ ಈ ಸಭೆಯಲ್ಲಿ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಬಹುದು ಎಂದರು.

ಅರ್ಜಿಗಳ ಸಲ್ಲಿಸಲು ಪ್ರತ್ಯೇಕ ಕೌಂಟರ್‌ಗಳನ್ನು ಕೂಡ ತೆರೆಯಲಾಗುತ್ತದೆ. ಪೋರ್ಟಲ್ ಮೂಲಕ ಅರ್ಜಿಗಳನ್ನು ನೋಂದಾಯಿಸಿ ಅರ್ಜಿದಾರರಿಗೆ ತಕ್ಷಣ ಸ್ವೀಕೃತಿ ನೀಡಲಾಗುವುದು. ವಿವಿಧ ಇಲಾಖೆಗಳ ಯೋಜನೆಗಳ ಜತೆಗೆ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿ ನೀಡಲು ಪ್ರತ್ಯೇಕ ಮಳಿಗೆಗಳ ತೆರೆಯಲಾಗಿರುತ್ತದೆ. ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುವುದು ಎಂದು ಹೇಳಿದರು.

*ಕುಂದುಕೊರತೆ ಸಲ್ಲಿಕೆ: ಕಾರ್ಯಕ್ರಮದಲ್ಲಿ ತೆರೆಯಲಾಗಿದ್ದ ವಿವಿಧ ಇಲಾಖೆಗಳ ಪೋರ್ಟಲ್‌ಗಳಲ್ಲಿ ಪಿಂಚಣಿ, ಪಡಿತರ ಚೀಟಿ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೊಡೇಕಲ್ ಹೋಬಳಿ ವಲಯದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಒಟ್ಟು 158 ಅರ್ಜಿಗಳು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸ್ವಿಕೃತಗೊಂಡಿವೆ. ಸರಳ ಹಾಗೂ ತುರ್ತು ಪರಿಹಾರ ಅಗತ್ಯವಿದ್ದ ಹಲವು ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಸ್ಥಳದಲ್ಲೇ ಪರಿಹಾರ ನೀಡಿದರು.

ಹುಣಸಗಿ ತಹಸೀಲ್ದಾರ ಎಂ.ಬಸವರಾಜ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ, ಗ್ರೇಡ್-2 ತಹಸೀಲ್ದಾರ ಮಲಯ್ಯ ದಂಡು, ಉಪ ತಹಸೀಲ್ದಾರ ಕಲ್ಲಪ್ಪ ಜಂಜಿಗಡ್ಡಿ, ಸಿಪಿಐ ರವಿಕುಮಾರ, ಸಿಡಿಪಿಓ ಲಾಲಸಾಬ್ ಪೀರಾಪೂರ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೆಶಕ ರಾಮನಗೌಡ ಮಾಲಿಪಾಟೀಲ, ಉಪನೋಂದಣಿ ಅಧಿಕಾರಿ ಖಾದರ್‌ ಪಟೇಲ್, ಆರ್‌ಡಬ್ಲೂ ಇಲಾಖೆಯ ಎಇಇ ಎಚ್.ಡಿ.ಪಾಟೀಲ, ಬಿಇಓ ಲಿಂಗರಾಜ ಮೂಲಿಮನಿ, ತಾಲೂಕು ಪಶು ವೈದ್ಯಾಧಿಕಾರಿ ಡಾ. ಮಹಬೂಬಸಾಬ್ ಖಾಜಿ, ಜೆಸ್ಕಾಂ ಎಇಇ ಕಳಕಪ್ಪ, ಆಹಾರ ನಿರೀಕ್ಷಕ ಸಿ.ಎಸ್.ರಾಜು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕಲ್ಲಪ್ಪ ಜಂಜಿಗಡ್ಡಿ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಶಾಂತಪ್ಪ ವಂದಿಸಿದರು. ಎಸ್.ಎಸ್.ಮಾರನಾಳ ಕಾರ್ಯಕ್ರಮ ನಿರೂಪಿಸಿದರು.