ಉದ್ಯೋಗ ಖಾತ್ರಿ ಯೋಜನೆ ಸದುಪಯೋಗಪಡಿಸಿಕೊಳ್ಳಿ

| Published : Nov 14 2025, 03:30 AM IST

ಸಾರಾಂಶ

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಯುಕ್ತದಾರ ತಂತ್ರಾಂಶ ಜಾರಿಗೆ ತಂದಿದ್ದು, ಈ ತಂತ್ರಾಂಶದಡಿ ಆಯವ್ಯಯ ಸಿದ್ದಪಡಿಸಲಾಗುತ್ತಿದೆ.

ಯಲಬುರ್ಗಾ: ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಿಸುವ ನರೇಗಾ ಯೋಜನೆಯ ಲಾಭ ಅರ್ಹ ಫಲಾನುಭವಿಗಳು ಪಡೆಯಬೇಕು ಎಂದು ಪಿಡಿಒ ಎಫ್.ಡಿ. ಕಟ್ಟಿಮನಿ ಹೇಳಿದರು.

ತಾಲೂಕಿನ ಸಂಕನೂರ ಗ್ರಾಪಂ ವ್ಯಾಪ್ತಿಯ ಶಿರಗುಂಪಿ ಗ್ರಾಮದಲ್ಲಿ ೨೦೨೬-೨೭ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ (ಆಯವ್ಯಯ) ಸಿದ್ಧಪಡಿಸಲು ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿದರು.

ನರೇಗಾದಡಿ ಕೂಲಿಕಾರರು ನಾನಾ ಕಾಮಗಾರಿ ನಿರ್ವಹಿಸಲು ೨೦೨೬-೨೭ನೇ ಸಾಲಿನ ಕ್ರಿಯಾ ಯೋಜನೆ ಸಿದ್ದಪಡಿಸಲು ವಾರ್ಡ್ ಹಾಗೂ ಗ್ರಾಮಸಭೆ ನಡೆಸಲಾಗುತ್ತಿದೆ. ಫಲಾನುಭವಿಗಳು ವೈಯಕ್ತಿಕ ಕಾಮಗಾರಿ ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ಅಕುಶಲ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ವರ್ಷದಲ್ಲಿ ನೂರು ದಿನಗಳ ಕೆಲಸ ಖಾತ್ರಿ ಪಡಿಸುತ್ತದೆ. ಪ್ರತಿವರ್ಷ ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಗ್ರಾಪಂನಲ್ಲಿ ಕಾರ್ಮಿಕ ಆಯವ್ಯಯ ಸಿದ್ಧಪಡಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯ ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತಿದೆ ಎಂದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಯುಕ್ತದಾರ ತಂತ್ರಾಂಶ ಜಾರಿಗೆ ತಂದಿದ್ದು, ಈ ತಂತ್ರಾಂಶದಡಿ ಆಯವ್ಯಯ ಸಿದ್ದಪಡಿಸಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿ ತೆಗೆದುಕೊಳ್ಳಲು ನ.೩೦ ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ವಾರ್ಡ್ ಸಭೆಯಲ್ಲಿ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯಲ್ಲಿ ರೈತರಿಂದ ಅರ್ಜಿ ಸ್ವೀಕರಿಸಲಾಯಿತು. ಅಲ್ಲದೆ ಕ್ರಿಯಾಯೋಜನೆ ಅಡಿಯಲ್ಲಿ ಸಮುದಾಯ ಕಾಮಗಾರಿಗಳಾದ ನಾಲಾ ಹೂಳೆತ್ತುವುದು, ಸಾಮೂಹಿಕ ಬದು ನಿರ್ಮಾಣ, ರಸ್ತೆ ಕಾಮಗಾರಿ, ಚರಂಡಿ, ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದು, ದನದದೊಡ್ಡಿ, ಕುರಿದೊಡ್ಡಿ, ತೋಟಗಾರಿಕೆ ಕಾಮಗಾರಿಗಳನ್ನು ವಾರ್ಡ್ ಸಭೆಯಲ್ಲಿ ರೈತರ ಬರೆಯಿಸಿದರು.

ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ನಾಗಮ್ಮ ತಳವಾರ್, ಸದಸ್ಯರಾದ ಸಂಗಪ್ಪ ಸಂಗಳದ, ಸುಮಿತ್ರ ಮಲ್ಲನಗೌಡ ಪೊಲೀಸ್ ಪಾಟೀಲ್, ಮೇಟ್‌ಗಳಾದ ಪರಶುರಾಮ ಕದಡಿ, ಯಲ್ಲಪ್ಪ ಜಾಲಿಹಾಳ, ರೇಣುಕಾ, ಶರಣಪ್ಪ ಜಟ್ಟಿ ಹಾಗೂ ಕಾಯಕ ಬಂಧುಗಳು, ರೈತರು, ಗ್ರಾಮಸ್ಥರು ಇದ್ದರು.