ಕನ್ನಡಪ್ರಭ ವಾರ್ತೆ ಶಿರಸಿ

ನಮ್ಮ ಆಚಾರ ವಿಚಾರ ಮನನ ಮಾಡಿಕೊಳ್ಳಲು ನಾವು ಸಂಘಟನೆ ರೂಪದಲ್ಲಿ ಸೇರಿದ್ದೇವೆ. ಜೀವನವನ್ನು ನಾವು ಹೇಗೆ ಕಟ್ಟಿಕೊಳ್ಳಬೇಕು, ತನ್ಮೂಲಕ ದೇಶದ ಏಕತೆಗೆ ಕಟಿಬದ್ಧರಾಗುವುದಕ್ಕೆ ಇಂದು ಸಮಾವೇಶ ರೂಪದಲ್ಲಿ ಸೇರುತ್ತಿದ್ದೇವೆ. ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ಈ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುವ ಉದ್ದೇಶ ಸಾಮಾನ್ಯ ಜನರದ್ದಾಗಬೇಕೆಂದು ನೆಲೆಮಾವು ಮಠದ ಮಾಧವಾನಂದ ಭಾರತಿ ಸ್ವಾಮೀಜಿ ನುಡಿದರು.

ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ಉಂಚಳ್ಳಿಯಲ್ಲಿ ಸಂಘಟಿಸಲಾಗಿದ್ದ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಹಾಗೂ ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

ಸೂರ್ಯೋದಯ ಪೂರ್ವದಲ್ಲಿ ನಮ್ಮ ನಮ್ಮ ದೈನಂದಿನ ಕರ್ಮಾನುಷ್ಠಾನ ಮಾಡಬೇಕು. ಇಂದಿನ ಪೀಳಿಗೆ ಪಾಶ್ವಿಮಾತ್ಯ ಸಂಸ್ಕೃತಿಗೆ ಮಾರು ಹೋಗುವುದು ಕಂಡು ಬರುತ್ತಿದೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳೆಲ್ಲಾ ಮಾಯವಾಗುತ್ತಿದೆ. ಅದಾಗದಂತೆ ಎಚ್ಚರ ವಹಿಸಬೇಕಾಗಿದ್ದು, ಜಾತಿ ಜಾತಿಗಳಲ್ಲಿ ಅಸಮಾನತೆ ಇರುವುದರಿಂದ ಬೇರೆ ಧರ್ಮದವರು ಅದರ ಲಾಭ ಪಡೆಯುತ್ತಿದ್ದಾರೆ. ಇದರಿಂದ ನಮ್ಮ ಹಿಂದೂ ಸಮಾಜಕ್ಕೆ ಅತಿಯಾಗಿ ಹಾನಿ, ತೊಂದರೆಗಳು ಉಂಟಾಗುತ್ತಿದೆ. ಹಾಗಾಗಲು ಬಿಡಬಾರದು. ಬದಲಾಗಿ, ನಾವೆಲ್ಲರೂ ಹಿಂದು ಎಂಬ ಒಗ್ಗಟ್ಟಿನ ಸಂಕೇತ ಬರಬೇಕಾಗಿದೆ ಎಂದರು.

ಇಂದು ನಾವು ದೀಪ ಆರಿಸಿ ಹುಟ್ಟುಹಬ್ಬ ಆಚರಿಸುತ್ತೇವೆ. ಇದು ನಮ್ಮ ಸಂಸ್ಕೃತಿ ಅಲ್ಲ, ಬದಲಾಗಿ ದೀಪ ಬೆಳಗಿಸುವ ಸಂಸ್ಕೃತಿ ನಮ್ಮದು, ನಮ್ಮ ಮಕ್ಕಳಿಗೆ ಉತ್ತಮ ಆಚಾರ ವಿಚಾರವನ್ನು ಬಾಲ್ಯದಿಂದಲೇ ಮಾರ್ಗದರ್ಶನ ಮಾಡುತ್ತಾ, ದೇಶಪ್ರೇಮವನ್ನು ಅವರಲ್ಲಿ ಬೆಳೆಸುವ ಕಾರ್ಯವಾಗಬೇಕಿದೆ. ಇದರಿಂದ ಸಮಾಜದ ಉನ್ನತಿ ಕೂಡ ಆಗುತ್ತದೆ ಎಂದರು.


ಇದೇ ಸಂದರ್ಭ ಉಂಚಳ್ಳಿ ಸುತ್ತಮುತ್ತಲಿನ ಗ್ರಾಮದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಹಿರಿಯ ಸಹಕಾರಿ ಮೋಹನ್ ಹೆಗಡೆ ಕಬ್ಬೆ, ಹಿಂದೂ ಸಂಘಟನೆಯಲ್ಲಿ ತೊಡಗಿಕೊಂಡ ಉಮೇಶ್ ಹೆಗಡೆ ಉಂಚಳ್ಳಿ, ಶ್ಯಾಮ್ ಲಮಾಣಿ, ರಾಘವ್ ಈರಾ ನಾಯ್ಕ, ಪೂಜಾ ಲಕ್ಷ್ಮೀಶ್ ನಾಯ್ಕ, ದೇವಕಿ ಅಣ್ಣಪ್ಪ ನಾಯ್ಕ, ನಾಗರಾಜ್ ಗಣೇಶ್ ನಾಯ್ಕ, ಸೋಮೇಶ್ ಬಡಗಿ, ರಾಮಾ ಕೆರಿಯಪ್ಪಾ ತಲಗಾರ್ ಮತ್ತು ಗಣಪತಿ ಚಂದ್ರಶೇಖರ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿರಸಿ ವಿಭಾಗದ ವ್ಯವಸ್ಥಾಪಕ ಪ್ರಮುಖ ಸತ್ಯನಾರಾಯಣ ಭಟ್ಟ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಕಿರಾಣಿ ವರ್ತಕ ವಿನಾಯಕ್ ನಾಯ್ಕ ಉಂಚಳ್ಳಿ ಹಾಗೂ ಉಂಚಳ್ಳಿ ಸುತ್ತಮುತ್ತಲ ಗ್ರಾಮದಲ್ಲಿರುವ ಒಟ್ಟು 9 ಗ್ರಾಮ ದೇವಾಲಯಗಳ ಆಡಳಿತ ಮಂಡಳಿ ಅಧ್ಯಕ್ಷರು ಉಪಸ್ಥಿತರಿದ್ದರು.

ನ್ಯಾಯವಾದಿ ಆರ್‌.ಜಿ. ನಾಯ್ಕ ಕೆರೆಕೊಪ್ಪ ಸಮ್ಮೇಳನದ ನಿರ್ಣಯ ಮಂಡಿಸಿ, ಸನ್ಮಾನಿತರ ಪರಿಚಯ ಮಾಡಿದರು. ಉಂಚಳ್ಳಿ ಮಂಡಳದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಧನಂಜಯ ಹೆಗಡೆ ಉಂಚಳ್ಳಿ ಸಮಾವೇಶ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಅನಂತ್ ಹೆಗಡೆ ಕಬ್ಬೆ ಮತ್ತು ನರಸಿಂಹ ಭಟ್ಟ ಉಂಚಳ್ಳಿ ಅವರ ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾತೆಯರಾದ ವಿದ್ಯಾ, ಲಕ್ಷ್ಮಿ, ಲಲಿತಾ, ಹೇಮಾ, ಸುಧಾ, ಪ್ರಾರ್ಥನಾ ಭಗವದ್ಗೀತೆ ಪಠಿಸಿದರು. ವಾಮನ್ ನಾಯ್ಕ್ ಕಾನಕೊಪ್ಪ ದಂಪತಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರೆ, ಗಜೇಂದ್ರ ಗಂಗೇಮತ ಶಂಕನಾದ ಮಾಡಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ನಿರೂಪಿಸಿದರು. ವಿ.ಎಂ. ಹೆಗಡೆ ಕಬ್ಬೆ ವಂದಿಸಿದರು.

ಸಭಾ ಕಾರ್ಯಕ್ರಮ ಪೂರ್ವದಲ್ಲಿ ಉಂಚಳ್ಳಿ ಸುತ್ತಮುತ್ತಲ ಗ್ರಾಮವನ್ನು ಒಳಗೊಂಡು, ಅತ್ಯಂತ ಶಿಸ್ತು ಬದ್ಧವಾಗಿ ಭಾರತ ಮಾತೆಯ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಡೆಸಲಾಯಿತು.