ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ. ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಆಗುತ್ತಿರುವ ಲೋಪ ದೋಷಗಳನ್ನು ಸರಿಪಡಿಸಿ ಶೇ. 100ರಷ್ಟು ಅನುಷ್ಠಾನಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ.

ಲಕ್ಷ್ಮೇಶ್ವರ: ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಸಮ್ಮೇಳನವು ಫೆ. 18ರಂದು ನಡೆಯಲಿದ್ದು, ಜಿಲ್ಲಾ ಮಟ್ಟದ ಗ್ಯಾರಂಟಿ ಸಮ್ಮೇಳವನ್ನು ಯಶಸ್ವಿಗೊಳಿಸುವುದು ಅಗತ್ಯವಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ನಾಗರಾಜ ಮಡಿವಾಳರ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನವಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ಜಿಲ್ಲೆಯ ಪಂಚ ಗ್ಯಾರಂಟಿ ಸಮ್ಮೇಳನವು ಫೆ. 18ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ ಎಂದರು.

ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ. ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಆಗುತ್ತಿರುವ ಲೋಪ ದೋಷಗಳನ್ನು ಸರಿಪಡಿಸಿ ಶೇ. 100ರಷ್ಟು ಅನುಷ್ಠಾನಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಸ್ ನಿರ್ವಹಣೆ ಮಾಡಬೇಕು ಎಂದರು.

ಹೆಸ್ಕಾಂ ಇಲಾಖೆಯು ರೈತರ ಪಂಪ್‌ಸೆಟ್ಟುಗಳಿಗೆ ಸರಿಯಾದ ವಿದ್ಯುತ್ ಪೂರೈಸುವ ಕಾರ್ಯ ಮಾಡಬೇಕು. ರೈತರಿಂದ ಟಿಸಿ ಕೊಡುವುದಕ್ಕೆ ಅಕ್ರಮವಾಗಿ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದ್ದು, ರೈತರ ಹಿತ ಕಾಯುವ ಕಾರ್ಯ ಮಾಡಬೇಕು ಎಂದರು.

ಇದಕ್ಕ ಹೆಸ್ಕಾಂ ಎಇಇ ಆಂಜನೇಯ ಅವರು ಉತ್ತರ ನೀಡಿ, ರೈತರು ನೇರವಾಗಿ ನಮ್ಮ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣ ನೀಡಿ ಕೈ ಸುಟ್ಟುಕೊಳ್ಳಬೇಡಿ ಎಂದರು.

ಆಹಾರ ಇಲಾಖೆಯ ಜಗದೀಶ ಕುರಬರ ಮಾತನಾಡಿ, ಆದಾಯದ ಮಿತಿ ಮೀರಿರುವ ಬಿಪಿಎಲ್ ಕಾರ್ಡಗಳನ್ನು ರದ್ದು ಪಡಿಸಿ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ನೀಡುವ ಕಾರ್ಯ ಸದ್ಯದಲ್ಲಿಯೇ ಆರಂಭವಾಗುತ್ತದೆ ಎಂದರು.

ತಾಪಂ ಇಒ ಕೃಷ್ಣಪ್ಪ ಧರ್ಮರ, ಪಂಚ ಗ್ಯಾರಂಟಿ ಸಮಿತಿ ಸದಸ್ಯ ರಮಜಾನಸಾಬ ನದಾಫ್, ಹಸನ್‌ಸಾಬ ಜಂಗ್ಲಿ, ಶಿವರಾಜಗೌಡ ಪಾಟೀಲ, ಶಶಿಕಲಾ ಬಡಿಗೇರ, ಗಂಗಪ್ಪ ಕಲ್ಲಣ್ಣವರ, ರಮೇಶ ಬಾರ್ಕಿ ಹಾಗೂ ತಾಲೂಕಿನ ಪಂಚ ಗ್ಯಾರಂಟಿ ಅನುಷ್ಠಾನಾಧಿಕಾರಿಗಳು ಇದ್ದರು.